ಸರಳ ರೀತಿಯಲ್ಲಿ ಶಿರೂರು ಶ್ರೀ ಸಂಸ್ಮರಣೆ ಆಚರಿಸೋಣ ಕೇಮಾರು ಶ್ರೀ ಕರೆ

Spread the love

ಸರಳ ರೀತಿಯಲ್ಲಿ ಶಿರೂರು ಶ್ರೀ ಸಂಸ್ಮರಣೆ ಆಚರಿಸೋಣ ಕೇಮಾರು ಶ್ರೀ ಕರೆ

ಉಡುಪಿ: ಜುಲೈ19ರಂದು ಜರಗಲಿರುವ ಉಡುಪಿ ಶ್ರೀಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಎರಡನೇ ವರ್ಷದ ಕೃಷ್ಣೈಖ್ಯ ದಿನವನ್ನು ಈ ಭಾರಿ ಸರಳ ರೀತಿಯಲ್ಲಿ ಆಯೋಜಿಸಬೇಕೆಂದು ಕೇಮಾರು ಶ್ರೀಪಾದರು ಹಾಗೂ ಅಭಿಮಾನಿ ಬಳಗದವರು ಶ್ರೀ ಶಿರೂರು ಭಕ್ತವೃಂದಕ್ಕೆ ಕರೆ ನೀಡಿದ್ದಾರೆ.

ನಿರಂತರ 48 ವರ್ಷಗಳ ಕಾಲ ಶ್ರೀಕೃಷ್ಣದೇವರಿಗೆ ಪೂಜೆ ಸಲ್ಲಿಸಿ,ಮೂರು ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿ ಕೃಷ್ಣಮಠ ಹಾಗೂ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಶ್ರೀಮುಖ್ಯಪ್ರಾಣದೇವರ ಅನನ್ಯ ಉಪಾಸಕ, ಉಡುಪಿ ಶ್ರೀಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು 2018ರ ಜುಲೈ19ರಂದು ಹರಿಪಾದ ಸೇರಿದ್ದರು.

ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು,ಉಡುಪಿ, ಸಿಮಂತೂರು,ಕೇಮಾರು ಸೇರಿದಂತೆ ನಾಡಿನ ವಿವಿಧ ಸ್ಥಳಗಳಲ್ಲಿ ಶ್ರೀ ಶಿರೂರು ಶ್ರೀಪಾದರ ಜನ್ಮದಿನ ಹಾಗೂ ಕೃಷ್ಣೈಖ್ಯ ದಿನವನ್ನು ಶ್ರೀಶಿರೂರು ಶ್ರೀಪಾದರ ಆಪ್ತರಾದ ಶ್ರೀಕೇಮಾರು ಸಾಂದೀಪಿನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತವೃಂದವು ವಿವಿಧ ಸಮಾಜಮುಖೀ ಕಾರ್ಯಕ್ರಮಗಳೊಂದಿಗೆ ಸ್ಮರಣಾರ್ಹವಾಗಿ ಆಯೋಜಿಸಿತ್ತು.

ಆದರೆ ಈ ಭಾರೀ ಕೊರೋನಾ ಸಮಸ್ಯೆಯು ಎಲ್ಲೆಡೆ ತೀವ್ರಗೊಂಡಿರುವ ಕಾರಣ ಜಿಲ್ಲಾಡಳಿತದ ನೀತಿ ಸಂಹಿತೆಯನ್ನು ಗೌರವಿಸಿ ಶ್ರೀಶಿರೂರು ಶ್ರೀಪಾದರ ಸಂಸ್ಮರಣಾ ಕಾರ್ಯಕ್ರಮವನ್ನು ಶಿಷ್ಯ ಸಮುದಾಯ ಹಾಗೂ ಅಭಿಮಾನಿಗಳು ಸ್ವಗೃಹದಲ್ಲೇ ಸರಳವಾಗಿ ಆಚರಿಸಬೇಕೆಂದು ಶ್ರೀಕೇಮಾರು ಶ್ರೀಪಾದರು,ಶಿರೂರು ಶ್ರೀ ಅಭಿಮಾನಿ ಬಳಗದ ಶ್ರೀ ರಾಧಾಕೃಷ್ಣ ಶೆಟ್ಟಿ ದೊಡ್ನಗುಡ್ಡೆ,ಜಯರಾಂ ಅಂಬೇಕಲ್ಲು, ನವೀನ್ ರಾವ್,ಶ್ರೀಜಿತ್ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯ ಆಚಾರ್ಯ ವಿನಂತಿಸಿಕೊಂಡಿದ್ದಾರೆ.


Spread the love