ಸಾಮೂಹಿಕ ವಿವಾಹ ಕುರಿತು ರಾಜ್ಯಾದ್ಯಂತ ವಿಚಾರ ಸಂಕಿರಣ- ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಸಾಮೂಹಿಕ ವಿವಾಹ ಕುರಿತು ರಾಜ್ಯಾದ್ಯಂತ ವಿಚಾರ ಸಂಕಿರಣ- ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಜ್ಯದ ವಿವಿಧ ಎ ದರ್ಜೆಯ ದೇವಾಲಯಗಳಲ್ಲಿ ಮುಜರಾಯಿ ಇಲಾಖೆವತಿಯಿಂದ ಏಪ್ರಿಲ್ 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಗುರುವಾರ, ಕೊಲ್ಲೂರು ನಲ್ಲಿ ಸಾಮೂಹಿಕ ಸರಳ ವಿವಾಹ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತಂತೆ ರಾಜ್ಯದ ಎಲ್ಲಾ ಸಂಸದರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ , ನಗರಸಭೆ ಗಳ ಅಧ್ಯಕ್ಷರು ಉಪಾಧ್ಯಕರಿಗೆ ವೈಯಕ್ತಿಕವಾಗಿ ಪತ್ರ ಬರೆದು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಹಕರ ನೀಡುವಂತೆ ಕೋರಲಾಗಿದೆ, ಎಲ್ಲರೂ ಪಕ್ಷ ಬೇಧ ಮರೆತು ಕಾರ್ಯಕ್ರಮ ಆಯೋಜಿಸುವಂತೆ ಕೋರಲಾಗಿದೆ ಎಂದು ಸಚಿವ ಕೋಟ ತಿಳಿಸಿದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ಯಾವುದೇ ಆರ್ಥಿಕ ಕೊರತೆ ಇಲ್ಲವಾಗಿದ್ದು, ರಾಜ್ಯದಲ್ಲಿ ವಾರ್ಷಿಕ 100 ಕೋಟಿ ರೂ ಆದಾಯ ತರುವ ದೇವಾಲಯಗಳಿದ್ದು , ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ವಿವಾಹ ನಡೆಸಲು ಸಿದ್ದವಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮದ ರಾಯಭಾರಿಗಳಾಗಿ ಚಿತ್ರ ನಟ ಯಶ್ ಮತ್ತು ಇನ್ಪೋಸಿಸ್ ನ ಸುಧಾಮೂರ್ತಿ ತಮ್ಮ ವೀಡಿಯೋ ಮತ್ತು ಧ್ವನಿ ಮುದ್ರಣದ ಮೂಲಕ ರಾಜ್ಯಾದ್ಯಂತ ಎಲ್ಲರನ್ನು ತಲುಪಲಿದ್ದಾರೆ ಎಂದು ಮುಜರಾಯಿ ಸಚಿವರು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ವಧು ವರರಿಗೆ ರೂ.55000 ಗಳ ವೆಚ್ಚದಲ್ಲಿ ಬಟ್ಟೆ ಮತ್ತು ಚಿನ್ನದ ತಾಳಿ, ಚಿನ್ನದ ಗುಂಡು ನೀಡುವುದರ ಜೊತೆಗೆ, ಕಂದಾಯ ಇಲಾಖೆವತಿಯಿಂದ ವಧುವಿಗೆ ಆದರ್ಶ ವಿವಾಹ ಯೋಜನೆಯಡು 10000 ಗಳ ನಿಶ್ಚಿತ ಠೇವಣಿ ಸೌಲಭ್ಯ, ಪರಿಶಿಷ್ಠ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಯೋಜನೆಯಡಿ 50000 ಗಳ ಸೌಲಭ್ಯ ದೊರೆಯಲಿದೆ ಎಂದು ಸಚಿವ ಕೋಟ ತಿಳಿಸಿದರು.

ಏಪ್ರಿಲ್ 26 ರಂದು ನಡೆಯುವ ಸಾಮಾಹಿಕ ವಿವಾಹಕ್ಕೆ ವಧು ವರರ ನೊಂದಾವಣಿಗೆ ಮಾರ್ಚ್ 27 ಕೊನೆಯ ದಿನಾಂಕವಾಗಿದ್ದು, ವಧು ವರರು ಅರ್ಜಿಗಳನ್ನು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಂಧ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಿದ ಮುಜರಾಯಿ ಸಚಿವರು, ವಿವಾಹ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ವಿರೇಂದ್ರ ಹೆಗಡೆ, ಸುತ್ತೂರು ಮಠದ ಮಠಾಧೀಶರು, ಸಿದ್ದಗಂಗಾ ಮಠಾಧೀಶರು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಬಂದು ಹಾರೈಸಲಿದ್ದು, ವಿವಿಧ ಖಾಸಗಿ ಸಂಸ್ಥೆಗಳು ವಧು ವರರಿಗೆ ಉಚಿತ ಉಡುಗೊರೆಗಳನ್ನು ನೀಡಲು ಮುಂದೆ ಬಂದಿವೆ ಎಂದರು.

ಸಭೆಯಲ್ಲಿ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ , ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ , ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗಡೆ ಹಾಗೂ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.


Spread the love