ಸಿಸಿಬಿ ಪೋಲಿಸರಿಂದ ಕುಖ್ಯಾತ ಆರೋಪಿ ಪ್ರದೀಪ್ ಮೆಂಡನ್ ಸೆರೆ

Spread the love

ಸಿಸಿಬಿ ಪೋಲಿಸರಿಂದ ಕುಖ್ಯಾತ ಆರೋಪಿ ಪ್ರದೀಪ್ ಮೆಂಡನ್ ಸೆರೆ
ಮಂಗಳೂರು: ಕೊಲೆ, ಕೊಲೆಯತ್ನ ಹಾಗೂ ಶಸ್ತಾಸ್ತ್ರ ಕಾಯ್ದೆ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಬಂಧಿತನನ್ನು ಕುಖ್ಯಾತ ಆರೋಪಿ ಉಡುಪಿ ಅಂಬಲಪಾಡಿ ಆದಿ ಉಡುಪಿಯ ಪ್ರದೀಪ್ ಮೆಂಡನ್ ಎಂದು ಗುರುತಿಸಲಾಗಿದೆ.
ಆರೋಪಿ ಉಡುಪಿ ಅಂಬಲಪಾಡಿ ಆದಿ ಉಡುಪಿಯ ಪ್ರದೀಪ್ ಮೆಂಡನ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡು ಸುಮಾರು 7 ತಿಂಗಳುಗಳಿಂದ ಪ್ರಕರಣಗಳ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಮಂಗಳೂರು ನಗರದ ಕದ್ರಿ ಪಾರ್ಕ್ ಬಳಿಯಿರುವ ಗೋರಕ್ಷನಾಥ ಹಾಲ್ ಬಳಿಯಲ್ಲಿದ್ದಾನೆಂಬ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈತನನ್ನು ವಶಕ್ಕೆ ಪಡೆದುಕೊಂಡ ಸಮಯ ಈತನು ಬೇರೆ ವ್ಯಕ್ತಿಗಳ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ನ್ನು ಉಪಯೋಗಿಸಿಕೊಂಡು ತಲೆಮರೆಸಿಕೊಂಡಿದ್ದರಿಂದ ಈತನು ಉಪಯೋಗಿಸುತ್ತಿದ್ದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡು ಬೇರೆ ವ್ಯಕ್ತಿಗಳ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಉಪಯೋಗಿಸಿದ್ದರಿಂದ ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆರೋಪಿ ಪ್ರದೀಪ್ ಮೆಂಡನ್ ಎಂಬಾತನು ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ, 6 ಕೊಲೆ ಯತ್ನ ಪ್ರಕರಣ, 2 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಪಾಸ್ ಪೋರ್ಟ್ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ಈ ಪೈಕಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಬಿಜೈ ರಾಜಾ ಕೊಲೆ ಪ್ರಕರಣ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಹಾಗೂ ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪಾಸ್ ಪೋರ್ಟ್ ಕಾಯ್ದೆ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love