ಸೋಮೇಶ್ವರ- ಕೋಟೇಶ್ವರ ರಸ್ತೆ ಕಾಮಗಾರಿ: ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಆದೇಶ 

Spread the love

ಸೋಮೇಶ್ವರ- ಕೋಟೇಶ್ವರ ರಸ್ತೆ ಕಾಮಗಾರಿ: ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಆದೇಶ 

ಉಡುಪಿ: ಕುಂದಾಪುರ ತಾಲೂಕು ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಬೇಕಾಗಿರುವುದರಿಂದ ಮೇ 16 ರಿಂದ ಜುಲೈ 16 ರ ವರೆಗೆ ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನ ಹಾಗೂ ಬಸ್ಸುಗಳ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ.

ಈ ಆದೇಶದನ್ವಯ ಕುಂದಾಪುರ ಹಾಗೂ ಉಡುಪಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್ಗಳು ಹಾಗೂ ಇತರೆ ವಾಹನಗಳಿಗೆ ಹಳೆ ಗೋಪಾಡಿ ಪಂಚಾಯತ್ (ಹೂವಿನಕೆರೆ ಸ್ವಾಗತ ಗೋಪುರ) ಮುಖೇನ ರಾ. ಹೆ.66 ಯಿಂದ ಪೂರ್ವ ದಿಕ್ಕಿಗೆ ಚಲಿಸಿ ಬೀಜಾಡಿ- ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ, ವಕ್ವಾಡಿಯ ಗುರುಕುಲ ಶಾಲೆಗೆ ಹೋಗುವ ಕಾಂಕ್ರೀಟ್ ರಸ್ತೆಗೆ (ರಸ್ತೆ ಎಡಕ್ಕೆ) ಚಲಿಸಿದಲ್ಲಿ ಗುರುಕುಲ ಶಾಲೆಯ ಬಳಿ 2 ರಸ್ತೆಗಳು ಕವಲೊಡೆದು ಹೋಗುತ್ತಿದ್ದು, ಈ ಎರಡು ರಸ್ತೆಗಳ ಪೈಕಿ ರಸ್ತೆಯ ಎಡಕ್ಕೆ (ಪಶ್ಚಿಮ) ಚಲಿಸಿದರೆ ಸನ್ರೈಸ್ ಫ್ಯಾಕ್ಟರಿಯ ಬಳಿಯ ಯುವ ಮೆರಿಡಿಯನ್ ಹಾಲ್ಗೆ ಸಂಪರ್ಕಿಸಿದರೆ, ಬಲಕ್ಕೆ (ಪೂರ್ವ) ವಾಹನಗಳು ಚಲಿಸಿ ಮುಂದೆ ಕಾಳಾವರ ಬಸ್ ಸ್ಟಾಪ್ ಸಂಪರ್ಕಿಸುವ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆಗೆ ಸಂಪರ್ಕ ಮಾಡಲು ಅನುಕೂಲವಾಗುತ್ತದೆ.

ಗುರುಕುಲ ಶಾಲೆಯ ಬಳಿ ಎರಡು ರಸ್ತೆಗಳ ಪೈಕಿ ರಸ್ತೆಯ ಬಲಕ್ಕೆ (ಪೂರ್ವ ದಿಕ್ಕಿಗೆ) ಘನ ವಾಹನಗಳು ಚಲಿಸಿ ಕಾಳಾವರ ಬಸ್ಸ್ಟಾಪ್ (ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಂಕ್ಷನ್) ನಲ್ಲಿ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸಿದ್ದು, ಹಾಲಾಡಿ- ಸೋಮೇಶ್ವರ ಕಡೆ ವಾಹನಗಳಿಗೆ ಸಂಚರಿಸಲು ಯೋಗ್ಯವಾದ ಮಾರ್ಗವಾಗಿರುತ್ತದೆ. ಅಲ್ಲದೇ ಬೀಜಾಡಿ-ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ ಬಂದ ವಾಹನಗಳು ವಕ್ವಾಡಿ ರಸ್ತೆಯಲ್ಲಿ ನೇರವಾಗಿ ಬಂದು ಚಾರುಕೊಟ್ಟಿಯಿಂದಾಗಿ ಸಂಚರಿಸಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ತೆಕ್ಕಟ್ಟೆ, ಕೆದೂರು ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾಗುವ ಮಾರ್ಗವಾಗಿರುತ್ತದೆ.

ಕುಂದಾಪುರ, ತಲ್ಲೂರು, ಹೆಮ್ಮಾಡಿ. ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ತೆರಳುವ ಭಾರಿ ವಾಹನ ಹಾಗೂ ಬಸ್ಸುಗಳಿಗೆ ಬಸ್ರೂರು ಮೂರು ಕೈ ಜಂಕ್ಷನ್ನಲ್ಲಿ ರಾ.ಹೆ. 66 ರಸ್ತೆಯಲ್ಲಿ ಪೂರ್ವಕ್ಕೆ ಚಲಿಸಿ ಕೋಣಿ, ಬಸ್ರೂರು, ಬಿ.ಹೆಚ್. ಕ್ರಾಸ್ ಮಾರ್ಗವಾಗಿ ಜಪ್ತಿ ಮುಖೇನ ಸಂಚರಿಸಿ, ಹುಣ್ಸೆಮಕ್ಕಿ ತಲುಪಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ಮೇಲೆ ತಿಳಿಸಿದ ಸ್ಥಳಗಳಿಂದ ಬರುವ ವಾಹನಗಳಿಗೆ ಅತ್ಯಂತ ಸೂಕ್ತವಾದ ಮಾರ್ಗವಾಗಿರುತ್ತದೆ.

ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಯಿಂದ ಹುಣ್ಸೆಮಕ್ಕಿ, ಬಿದ್ಕಲ್ಕಟ್ಟೆ, ಹಾಲಾಡಿ-ಸೋಮೇಶ್ವರ ಕಡೆಗೆ ಹೋಗುವ ಲಘು ವಾಹನಗಳಿಗೆ (ಬಸ್ಸುಗಳಿಗೆ) ಮೇಲೆ ತಿಳಿಸಿದ ಮಾರ್ಗವಲ್ಲದೇ ಕೋಣಿ ಶಾಲೆ ಹಾಗೂ ಹೆಚ್.ಎಮ್.ಟಿ ರಸ್ತೆ ಮುಖೇನ ಚಲಿಸಿ ಕಟ್ಗೆರೆ ಕಡೆಗೆ ಸಂಚರಿಸಿದರೆ ಕೋಟೇಶ್ವರ-ಹಾಲಾಡಿ-ಸೋಮೇಶ್ವರ ರಸ್ತೆ ಸಂಪರ್ಕಿಸುತ್ತದೆ. ಸದ್ರಿ ರಸ್ತೆಯು ಲಘು ವಾಹನಗಳಿಗೆ ಸೂಕ್ತವಾದ ಮಾರ್ಗವಾಗಿರುತ್ತದೆ.

ಮೇಲಿನ ಎಲ್ಲಾ ಬದಲಿ ಮಾರ್ಗಗಳು ಹಾಲಾಡಿ ಕಡೆಯಿಂದ ಉಡುಪಿ ಅಥವಾ ಕುಂದಾಪುರ ಕಡೆಗೆ ಚಲಿಸುವ ವಾಹನಗಳಿಗೆ ಸಹ ಸೂಕ್ತ ಮಾರ್ಗವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love