ಹಕ್ಕುಪತ್ರ, ಪಿಂಚಣಿ ಚೆಕ್ ವಿತರಿಸಿದ ಶಾಸಕ ಕಾಮತ್

Spread the love

ಹಕ್ಕುಪತ್ರ, ಪಿಂಚಣಿ ಚೆಕ್ ವಿತರಿಸಿದ ಶಾಸಕ ಕಾಮತ್

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ 94ಸಿಸಿ ಹಕ್ಕುಪತ್ರ ಮತ್ತು ಪಿಂಚಣಿ ವಿತರಣಾ ಕಾರ್ಯಕ್ರಮವನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಶನಿವಾರ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಶಾಸಕ ಕಾಮತ್ ಅವರು ಇವತ್ತಿನ ಕಾರ್ಯಕ್ರಮದಲ್ಲಿ 75 ನಾಗರಿಕರಿಗೆ 94ಸಿಸಿ ಹಕ್ಕುಪತ್ರವನ್ನು ನೀಡಲಾಗುತ್ತದೆ. 375 ಹಿರಿಯರಿಗೆ ಪಿಂಚಣಿ ಸೌಲಭ್ಯದ ಚೆಕ್ ವಿತರಿಸಲಾಗುತ್ತದೆ. ಇಲ್ಲಿಯ ತನಕ ಒಂಭತ್ತು ಫಲಾನುಭವಿಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ 4 ಲಕ್ಷಕ್ಕಿಂತಲೂ ಹೆಚ್ಚು ಪರಿಹಾರ ನಿಧಿ ವಿತರಿಸಲಾಗಿದೆ. ಇನ್ನು ಸಾಕಷ್ಟು ಜನರಿಗೆ ಕೆಲವು ತಾಂತ್ರಿಕ ಕಾರಣಗಳಿಂದ ಹಕ್ಕುಪತ್ರ, ಪಿಂಚಣಿ, ಪರಿಹಾರ ನಿಧಿಯ ಚೆಕ್ ಸಿಗದೇ ಇದ್ದಲ್ಲಿ ಅದನ್ನು ಕೂಡ ಬರುವ ದಿನಗಳಲ್ಲಿ ನೀಡಲಾಗುವುದು. ತನ್ನ ಶಾಸಕತ್ವದ ಅವಧಿಯಲ್ಲಿ ಜನರಿಗೆ ಸರಕಾರದ ಕಡೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಸಂಪೂರ್ಣ ಪ್ರಯತ್ನ ಮಾಡುವುದಾಗಿ ಶಾಸಕ ಕಾಮತ್ ಹೇಳಿದರು. ಇದಕ್ಕಾಗಿ ಸಹಕರಿಸಿದ ಕಂದಾಯ ವಿಭಾಗದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಮೊಯಿಲಿ, ಪಾಲಿಕೆ ಸದಸ್ಯರಾದ ರೂಪಾ ಡಿ ಬಂಗೇರ, ದಿವಾಕರ, ಸುರೇಂದ್ರ, ಮೀರಾ ಕರ್ಕೇರಾ, ಸುಧೀರ್ ಶೆಟ್ಟಿ ಕಣ್ಣೂರು, ಜುಬೇದಾ ಅಜೀಝ್, ಮಾಜಿ ಮೇಯರ್ ಅಬ್ದುಲ್ ಅಜೀಜ್, ಬಿಜೆಪಿ ಮುಖಂಡರಾದ ಶಕಿಲಾ ಕಾವ, ಭಾಸ್ಕರಚಂದ್ರ ಶೆಟ್ಟಿ, ವಸಂತ ಜೆ ಪೂಜಾರಿ, ಕಿಶೋರ್ ಕೊಠಾರಿ ಸಹಿತ ನೂರಾರು ನಾಗರಿಕರು ಉಪಸ್ಥಿತರಿದ್ದರು


Spread the love