ಹಿಂದೂ ನಾಯಕರ ಮೈಮುಟ್ಟುವ ದುಸ್ಸಾಹಸ ಮಾಡಬೇಡಿ- ಯಶಪಾಲ್ ಸುವರ್ಣ

Spread the love

ಹಿಂದೂ ನಾಯಕರ ಮೈಮುಟ್ಟುವ ದುಸ್ಸಾಹಸ ಮಾಡಬೇಡಿ- ಯಶಪಾಲ್ ಸುವರ್ಣ

ಉಡುಪಿ: ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ,ಶರಣ್ ಪಂಪ್ ವೆಲ್ ಮತ್ತು ಜಗದೀಶ್ ಶೇಣವ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವಿಷಯ ನಿಜಕ್ಕೂ ಅತಂಕಕಾರಿ ರಾಜ್ಯ ಸರಕಾರ ಹಿಂದೂ ನಾಯಕರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ರಾಷ್ಟ್ರೀಯವಾದಿ, ಹಿಂದೂಪರ ಸಂಘಟನೆಗಳ ದಮನಕ್ಕೆ ವಿದೇಶಿ ಶಕ್ತಿಗಳ ಜೊತೆಗೆ ಇಲ್ಲಿನ ಕೆಲವು ಸಮಾಜಘಾತುಕರು ಕೈ ಜೋಡಿಸಿದ್ದು ಇವರನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ. ಹಿಂದೂ ನಾಯಕರಿಗೆ ಯಾವುದೇ ಸಮಸ್ಯೆಯಾದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಕರಾವಳಿಯ ಹಿಂದೂ ಸಮಾಜ ಸಿದ್ಧವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಕಾರಣ ಕೆಲ ಪಕ್ಷಗಳು ನಿರ್ದಿಷ್ಟ ಸಮುದಾಯವೊಂದರ ಮತ ಕ್ರೋಡೀಕರಣಕ್ಕೆ ಮುಂದಾಗಿವೆ. ಈ ಹಿಂದೆಯೂ ಹಲವಾರು ಬಾರಿ ಚುನಾವಣೆಯ ಸಮಯದಲ್ಲಿ ಹಿಂದೂ ಮುಖಂಡರ ಹತ್ಯಾಯತ್ನ ನಡೆಸಿ ಕೋಮು ಗಲಭೆ ಎಬ್ಬಿಸುವ ಪ್ರಯತ್ನ ನಡೆದಿತ್ತು. ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರನ್ನು ರಾಜ್ಯಸರಕಾರ ಮಟ್ಟ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಮ್ಮ ದೇಶದ ಭದ್ರತಾವ್ಯವಸ್ಥೆ ಅತ್ಯಂತ ಬಲಿಷ್ಟವಾಗಿದ್ದು, ರಾಷ್ಟ್ರಘಾತುಕ ಶಕ್ತಿಗಳನ್ನು ಮಟ್ಟಹಾಕುವ ಸಾಮರ್ಥ್ಯ ನಮ್ಮ ಇಲಾಖೆಗಳಿಗಿವೆ. ಆದರೆ ದೇಶದ ಒಳಗಿದ್ದುಕೊಂಡು ಈ ರೀತಿಯ ಕಾರ್ಯಗಳಿಗೆ ಕುಮ್ಮಕ್ಕು ನೀಡುವ ದುಷ್ಕರ್ಮಿಗಳನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ. ರಾಜ್ಯ ಸರಕಾರ ಈ ವಿಚಾರದಲ್ಲಿ ತನ್ನ ತುಷ್ಟೀಕರಣ ನೀತಿಯನ್ನು ಪಕ್ಕಕ್ಕಿಟ್ಟು ಮತೀಯವಾದಿ ಶಕ್ತಿಗಳನ್ನು ಕಠಿಣಕ್ರಮದ ಮೂಲಕ ಹತ್ತಿಕ್ಕಬೇಕು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.


Spread the love