ಹೊನ್ನಾವರದಲ್ಲಿ ಹಿಂದೂ ಕಾರ್ಯಕರ್ತನ ಹೆಣದ ಮೇಲೆ ಸಿದ್ದರಾಮಯ್ಯರಿಂದ ಅಭಿವೃದ್ದಿಯ ಶಿಲನ್ಯಾಸ ; ಸಂಸದೆ ಶೋಭಾ ಆಕ್ರೋಶ

Spread the love

ಹೊನ್ನಾವರದಲ್ಲಿ ಹಿಂದೂ ಕಾರ್ಯಕರ್ತನ ಹೆಣದ ಮೇಲೆ ಸಿದ್ದರಾಮಯ್ಯರಿಂದ ಅಭಿವೃದ್ದಿಯ ಶಿಲನ್ಯಾಸ ; ಸಂಸದೆ ಶೋಭಾ ಆಕ್ರೋಶ

ಉಡುಪಿ: ಸತತ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಭಟ್ಕಳಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಶಿಲನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅವರು ಜಿಲ್ಲೆಯಲ್ಲಿ ಇದ್ದವೇಳೆಯಲ್ಲಿಯೇ ಹಿಂದು ಸಂಘಟನೆಯ ಕಾರ್ಯಕರ್ತನ ಕೊಲೆಯಾಗಿದ್ದು ಅದನ್ನು ಮುಚ್ಚಿಟ್ಟ ಆತನ ಸಾವಿನ ದೇಹದ ಮೇಲೆ ಸಿದ್ದರಾಮಯ್ಯ ಅಭಿವೃದ್ದಿ ಕಾಮಗಾರಿಗಳ ಶಿಲನ್ಯಾಸ ಮಾಡಿದ್ದಾರೆ ಎಂದು ಉಡುಪಿ –ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಅವರು ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಇರುವ ಅವರ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಭಟ್ಕಳ ವಿಧಾನ ಸಭಾ ಕ್ಷೇತ್ರದ ಹೊನ್ನಾವರ ಚಂದಾಪುರದಲ್ಲಿ ಈದ್ ಆಚರಣೆಯ ಹಿಂದಿನ ದಿನ ಗಲಭೆಯಾಗಿತ್ತು. ಹನುಮಂತ ದೇವಸ್ಥಾನಕ್ಕೆ ಕಲ್ಲು ಬಿಸಾಡಿದ್ದು, ಅದರ ಎದುರುಗಡೆ ತಾತ್ಕಾಲಿಕವಾದ ಹಸಿರು ಬಣ್ಣದ ಮಸೀದಿಯನ್ನು ನಿರ್ಮಾಣ ಮಾಡಿ ದೇವಸ್ಥಾನದ ಸುತ್ತಮುತ್ತ ಸಂಪೂರ್ಣವಾಗಿ ಹಸಿರು ಮಾಡಿ ಮುಸಲ್ಮಾನರು ಮುಚ್ಚಿದ್ದರು. ಇದನ್ನು ಆಕ್ಷೇಪ ಮಾಡಿದ್ದಕ್ಕೆ ಅಲ್ಲಿದ್ದ ಹಿಂದೂಗಳ ಮೇಲೆ ಜಿಹಾದಿಗಳು ದೌರ್ಜನ್ಯ ಮಾಡಿದ್ದರು.ಅದರ ಬಳಿಕ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಸೂರಜ್ ನಾಯಕ್ ಹೋಗಿದ್ದು ಅವರ ಮೇಲೆ ಕೂಡ ಹಲ್ಲೆಗೆ ಯತ್ನಿಸಿದ್ದು ಅವರ ಕಾರನ್ನು ಸಂಪೂರ್ಣ ಜಖಂಗೊಳಿಸಲಾಗಿದೆ. ಪೋಲಿಸರು ಯಾವುದೆ ಕ್ರಮ ಕೈಗೊಳ್ಳಲಿಲ್ಲ ಜೀವಕ್ಕೆ ಬೆದರಿಕೆ ಇದೆ ಎಂದು ಎಸ್ಪಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಈದ್ ಬಳಿಕದ ಎರಡು ದಿನಗಳ ಕಾಲ ದೊಡ್ಡ ಮಟ್ಟದ ಗಲಭೆಗಳು ಹೊನ್ನಾವರದಲ್ಲಿ ನಡೆದಿವೆ.

ಹೊನ್ನಾವರ ನಗರದ ಶನೀಶ್ವರ ದೇವಸ್ಥಾನಕ್ಕೆ ಕಲ್ಲನ್ನು ಬಿಸಾಡಿದ್ದು  ಮಾತ್ರವಲ್ಲದ್ದೆ ಚಪ್ಪಲಿ ಕೂಡ ಎಸೆಯಲಾಗಿತ್ತು. ಅಲ್ಲಿ ಸೇರಿದ್ದ ಹಿಂದೂ ಕಾರ್ಯಕರ್ತರನ್ನು ಲಾಠಿ ಚಾರ್ಜ್ ಮಾಡಿ ಪೋಲಿಸರು ಚದುರಿಸಿದ್ದಾರೆ. ಅಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಮಚ್ಚು ಲಾಂಗು ಹಿಡಿದು ಜಿಹಾದಿಗಳು ಹೆದರಿಸುವ ಕೆಲಸ ಮಾಡಿದ್ದಾರೆ ಆದರೂ ಪೋಲಿಸರು ಕ್ರಮ ಕೈಗೊಂಡಿಲ್ಲ. ಮೊನ್ನೆ ರಾತ್ರಿ ಪರೇಶ್ ಮೇಶ್ತ ಎನ್ನುವ ಯುವಕ ನಾಪತ್ತೆಯಾಗಿದ್ದು ಈ ವಿಚಾರ ಪೋಲಿಸರಿಗೆ ತಿಳಿದಿತ್ತು. ನಿನ್ನೆ ಮುಖ್ಯಮಂತ್ರಿಗಳ ಕಾರ್ಯಕ್ರಮ ಉತ್ತರಕನ್ನಡದಲ್ಲಿದೆ ಎಂಬ ಕಾರಣಕ್ಕೆ ಪರೇಶ್ ಮೇಸ್ತನ ನಾಪತ್ತೆ ಪ್ರಕರಣವನ್ನು ಪೋಲಿಸರು ಮುಚ್ಚಿಟ್ಟರು. ಅಲ್ಲದೆ ಮುಖ್ಯಮಂತ್ರಿಗಳು 52 ಕಾಮಗಾರಿಗಳಿಗೆ ಅದ್ದೂರಿಯಾಗಿ ಶಿಲನ್ಯಾಸವನ್ನು ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೇಶ್ ಮೇಸ್ತ ಸತ್ತಿರುವುದು ಮತ್ತು ಆತನನ್ನು ಜಿಹಾದಿಗಳು ಕೊಂದಿರುವ ಮಾಹಿತಿ ಇತ್ತು. ಆದರೆ ಈ ಪ್ರಕರಣವನ್ನು ಮುಚ್ಚಿ ಹಾಕಿ ಆತನ ಹೆಣದ ಮೇಲೆ ಶಿಲನ್ಯಾಸ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ.

ಕಳೆದ ಬಾರಿ ಮಂಗಳೂರಿನಲ್ಲಿ ಶರತ್ ಮಡಿವಾಳ ಕೊಲೆಯಾದ ವೇಳೆ ಕೂಡ ಮುಖ್ಯಮಂತ್ರಿಗಳ ಕಾರ್ಯಕ್ರಮ ಅಡ್ಯಾರ್ ನಲ್ಲಿ ಆಯೋಜನೆಯಾಗಿತ್ತು ಆ ಕಾರಣಕ್ಕಾಗಿ ಆತ ಸತ್ತಿರುವ ಮಾಹಿತಿ ಕಾರ್ಯಕ್ರಮದ ಬಳಿಕ ನೀಡಲಾಗಿತ್ತು. ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ಕೊಲೆಯಾದಾಗ ಅಂತಹ ಜಿಲ್ಲೆಗೆ ಭೇಟಿ ನೀಡುತ್ತಾರೆ ವಿಚಾರವನ್ನು ಮುಚ್ಚಿಟ್ಟು ನಾಟಕವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾವರದಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದ್ದು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಸ್ವತಃ ಮುಖ್ಯಮಂತ್ರಿಗಳು ಈ ಬಗ್ಗೆ ತುಟಿ ಬಿಚ್ಚದೆ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ನರಸಿಂಹ ಮತ್ತು ಹರೀಶ ಎಂಬವರು ಮಾರಣಾಂತಿಕವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಹಾಗೂ ಇತರರು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಸ್ತನ ಶವದ ಮರಣೋತ್ತರ ಪರೀಕ್ಷೆಗೆ ನಮ್ಮ ಮನವಿಯ ಮೇರೆಗೆ ಮಣಿಪಾಲದ ವೈದ್ಯರು ತೆರಳುತ್ತಿದ್ದು, ಇಂತಹ ಮುಖ್ಯಮಂತ್ರಿಯಿಂದ ನಾವೂ ಯಾರ ರೀತಿಯ ರಕ್ಷಣೆ ಪಡೆಯಲು ಸಾಧ್ಯ ಎಂದರು.


Spread the love