ಜಿಲ್ಲಾ ಕಾರಾಗೃಹದ ಜಾಮರ್ : ಜಗದೀಶ ಶೇಣವ, ಶಾಸಕ ವೇದವ್ಯಾಸ ಕಾಮತ್ ನೈಜತೆಯನ್ನು ಮರೆಮಾಚಿ ಹೇಳಿಕೆ : ಮನೋರಾಜ್ ರಾಜೀವ
ಮಂಗಳೂರು: ನಗರದ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ ಗೆ ಸಂಬಂಧಪಟ್ಟಂತೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ, ಶಾಸಕ ವೇದವ್ಯಾಸ ಕಾಮತ್ ಅವರು ನೈಜತೆಯನ್ನು ಮರೆಮಾಚಿ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ನಿಜವಾದ ಕಾಳಜಿ ಇದ್ದಿದ್ದರೆ, ಜಾಮರ್ ನಿರ್ವಹಣೆ ಮಾಡುತ್ತಿರುವ ಕೇಂದ್ರ ಸರಕಾರದ ಅಧೀನದ ಟಿಸಿಐಎಲ್ ಸಂಸ್ಥೆಯ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಬಹುದಿತ್ತು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವಹಕ್ಕು ವಿಭಾಗದ ಅಧ್ಯಕ್ಷ ಮನೋರಾಜ್ ರಾಜೀವ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲ್ ಜಾಮರ್ ವಿಚಾರವಾಗಿ ಮಂಗಳೂರು ವಕೀಲರ ಸಂಘ ಮತ್ತು ಸ್ಥಳೀಯರೊಬ್ಬರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದು, ಜಾಮರ್ ನಿರ್ವಹಣೆ ಹೊಣೆ ಹೊತ್ತಿರುವ ಟಿಸಿಐಎಲ್ ಸಂಸ್ಥೆ ‘ಜಾಮರ್ ನ ಸಮಸ್ಯೆ ಸರಿಪಡಿಸಲಾಗಿದೆ‘ ಎಂದು ಹೈಕೋರ್ಟ್ ಗೆ ವರದಿ ನೀಡಿದೆ. ಸಮಸ್ಯೆ ಬಗೆ ಹರಿದಿಲ್ಲ ಎಂದಾದರೆ ಆಗಲೇ ಆಕ್ಷೇಪ ಸಲ್ಲಿಸಬಹುದಿತ್ತು. ಹೆಚ್ಚುವರಿ ಟವರ್ ಗಳನ್ನು ಅವಡಿಸಲೂ ಅವಕಾಶವಿದೆ. ಸಂಸದ ಬ್ರಿಜೇಶ್ ಚೌಟ ಅವರ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.
ವಕೀಲರ ಸಂಘದ ಅಧ್ಯಕ್ಷರಾಗಿ ಶೇಣವ ಅವರು, ಹೈಕೋರ್ಟ್ ಪೀಠಕ್ಕೆ ಕ್ಯಾಬಿನೆಟ್ ನಲ್ಲಿ ಅನುಮೋದನೆ, ನ್ಯಾಯಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ, ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಿಎಂಗೆ ಮನವಿ ಮಾಡಬಹುದಿತ್ತು. ಆದರೆ ಅದೆಲ್ಲವನ್ನು ಬಿಟ್ಟು ಜಾಮರ್ ಸಮಸ್ಯೆ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಹಾಗೂ ರಾಜಕೀಯ ಪ್ರೇರಿತವಾಗಿ ಸಚಿವ ಸಂಪುಟ ಸಭೆಯ ವೇಳೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಸದಸ್ಯರಾದ ನಂದಿನಿ, ಶಾಹೀದ್ ಬಡ್ಡೂರು, ಉಷಾ ಎಸ್., ಅರುಣಾ ಬಿ.ಪಿ., ಸುದರ್ಶನ್ ಮುಳಿಯ, ವಿನೋದರ ಪೂಜಾರಿ, ಮಂಜುನಾಥ ಪೂಜಾರಿ, ಮೋಹನ್ ಕಡೇಶ್ವಾಲ್ಯ ಮೊದಲಾದವರಿದ್ದರು.













