ಮಂಗಳೂರು: ಚಾಕುವಿನಿಂದ ಇರಿದು ಅಣ್ಣನ ಕೊಲೆ: ಆರೋಪಿ ತಮ್ಮನ ಬಂಧನ

Spread the love

ಮಂಗಳೂರು: ಚಾಕುವಿನಿಂದ ಇರಿದು ಅಣ್ಣನ ಕೊಲೆ: ಆರೋಪಿ ತಮ್ಮನ ಬಂಧನ

ಮಂಗಳೂರು: ಮೊಬೈಲ್ ಫೋನ್ ವಿಚಾರವಾಗಿ ಅಣ್ಣ-ತಮ್ಮನ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನನ್ನು ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೊಟ್ಟಾರ ಕ್ರಾಸ್ ಬಳಿ ರವಿವಾರ ರಾತ್ರಿ ನಡೆದಿದೆ.

ಅಡಿವೆಪ್ಪ (40) ಎಂಬವರು ಕೊಲೆಯಾದವರು. ರಾಜು (36) ಕೊಲೆ ಆರೋಪಿ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಈ ಅಣ್ಣತಮ್ಮಂದಿರು ಕೊಟ್ಟಾರ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದು, ಇಬ್ಬರು ಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರಿಗೂ ವಿಪರೀತ ಮದ್ಯಪಾನದ ಚಟವಿತ್ತು ಎಂದು ಹೇಳಲಾಗಿದೆ.

ರವಿವಾರ ರಾತ್ರಿ 10:30ರಿಂದ 11ರ ಗಂಟೆಯ ನಡುವೆ ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಜಗಳ ನಡೆದಿದೆ. ಈ ವೇಳೆ ರಾಜು ಚಾಕುವಿನಿಂದ ಅಡಿವೆಪ್ಪನಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ತಾಯಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

ಸ್ಥಳಕ್ಕೆ ಉರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜುವನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love
Subscribe
Notify of

0 Comments