ರೈತರನ್ನು ನಿರ್ಲಕ್ಷ ಮಾಡುತ್ತಿರುವ ಮೆಸ್ಕಾಂ: ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಕೃಷಿ ಪಂಪುಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸುತ್ತಿರುವ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಮೆಸ್ಕಾಂ ಇಲಾಖೆ ಬೇರೆ ಬೇರೆ ಸಬೂಬು ಹೇಳಿ ನಿರ್ಲಕ್ಷ ಮಾಡುತ್ತಿದೆ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.
ಸರ್ಕಾರಗಳು ತಾವು ರೈತರ ಪರ ಎನ್ನುವ ಹೇಳಿಕೆ, ಘೋಷಣೆಗಳನ್ನು ಮಾಡುತ್ತಿದ್ದರೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಪ್ರಸರಣ ನಿಗಮವಾದ ಮೆಸ್ಕಾಂ ಮಾತ್ರ ರೈತ ವಿರೋಧಿ ಕ್ರಮವನ್ನು ಅನುಸರಿಸುತ್ತಿದೆ. ಇವತ್ತು ರೈತ ಕೃಷಿ ಮಾಡುವುದೇ ಅತ್ಯಂತ ದೊಡ್ಡ ಸವಾಲಿನ ಕೆಲಸ, ಇಂತಹ ಕಾಲಘಟ್ಟದಲ್ಲಿ ಕೃಷಿಗೆ ಅಗತ್ಯ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಣ್ಣ ಹಾಗೂ ಅತೀ ಸಣ್ಣ ರೈತರು ಪಂಪುಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದರೆ ಮೆಸ್ಕಾಂ ಇಲಾಖೆ ಟ್ರಾನ್ಸ್ಫರಮ್ ಗಳಲ್ಲಿ ರೈತರಿಗೆ ನೀಡುವಷ್ಟು ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿಲ್ಲವೆಂದು ರೈತರ ಅರ್ಜಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ಮೆಸ್ಕಾಂ ಇಲಾಖೆ ಅರ್ಜಿ ಸಲ್ಲಿಸಿದ ರೈತರ ಪಂಪುಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡದೆ ವಿಳಂಬ ದೋರಣೆ ತೋರಿದರೆ ಮೆಸ್ಕಾಂ ಕಚೇರಿಗಳ ಮುಂದೆ ಧರಣಿ ನಡೆಸಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.













