ನಾಟೆಕಲ್| ಕಾಲೇಜು ಬಸ್ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು
ಕೊಣಾಜೆ: ವಿದ್ಯಾರ್ಥಿಗಳನ್ನು ಕರೆದುಕೊಂಡು ಕೊಣಾಜೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಾಲೇಜ್ ಬಸ್ ನಾಟೆಕಲ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಮಗುಚಿದ ಪರಿಣಾಮ ಹಲವು ವಿದ್ಯಾರ್ಥಿ ಗಳು ಗಾಯಗೊಂಡಿದ್ದು, ಬಸ್ ನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರನನ್ನು ಇನ್ಫೋಸಿಸ್ ಉದ್ಯೋಗಿ, ಚಿಕ್ಕಮಗಳೂರು ಮೂಲದ ಪ್ರಜ್ವಲ್ ಅರ್ನಾಲ್ಡ್ (31) ಎಂದು ಗುರುತಿಸಲಾಗಿದೆ.
ಕಾಲೇಜು ಬಸ್ ನಾಟೆಕಲ್ ಬಳಿ ಬೈಕನ್ನು ಓವರ್ ಟೇಕ್ ಮಾಡಿಕೊಂಡು ಹೋಗುತ್ತಿದ್ದಾಗ ಬಸ್ ನಿಯಂತ್ರಣ ಕಳೆದು ಕೊಂಡು ಸಮೀಪದ ಧರೆಗೆ ಒರಗಿ ನಿಂತಿದೆ. ಈ ಸಂದರ್ಭ ಬಸ್ ನಡಿ ದ್ವಿಚಕ್ರ ವಾಹನ ಸವಾರ ಸಿಲುಕಿ ಕೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಕ್ರೇನ್ ತರಿಸಿ ಬಸ್ನ್ನು ಮೇಲಕ್ಕೆತ್ತಿ ಸವಾರನನ್ನು ಹೊರತೆಗೆದರು. ಗಂಭೀರ ಗಾಯಗೊಂಡ ಸವಾರನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು, ಕೆಲವು ಹೊತ್ತು ಸಂಚಾರಕ್ಕೂ ಅಡಚಣೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.













