ಕಸ್ತೂರಿ ರಂಗನ್ ಚರ್ಚೆಗೆ ವಿಶೇಷ ಅಧಿವೇಶನ: ಐವನ್ ಡಿಸೋಜ ಒತ್ತಾಯ
ಮಂಗಳೂರು : ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರಕಾರ ಯಥಾವತ್ತಾಗಿ ಜಾರಿಗೆ ತಂದಿದ್ದು, ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಲಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ವಿಶೇಷ ಅಧಿವೇಶನ ಕರೆದು ಸಮಗ್ರವಾಗಿ ಚರ್ಚೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಉಪಗ್ರಹ ಅಥವಾ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದಾಗ ರಬ್ಬರ್ ಹಾಗೂ ಅಡಿಕೆ ತೋಟಗಳು ಅರಣ್ಯದಂತೆ ಕಾಣಿಸುತ್ತವೆ. ಭೂಮಟ್ಟದ ವಾಸ್ತವತೆ, ವೈಜ್ಞಾನಿಕ ಕಾರಣವನ್ನು ಅರಿಯದೇ ಬರೀ ನಕ್ಷೆ ನೋಡಿ ಕರಾವಳಿ ಮತ್ತು ಮಲೆನಾಡಿನ ದಟ್ಟ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ(ಇಎಸ್ಎ) ಎಂದು ಗುರುತಿಸಿರುವುದು ಖೇದಕರ. ವಾಸ್ತವ ಸ್ಥಿತಿ ಅಧ್ಯಯನವಾಗಬೇಕು. ಹೆಬ್ರಿ ಇಡೀ ತಾಲೂಕನ್ನು ಕಸ್ತೂರಿ ರಂಗನ್ ವರದಿಯೊಳಗೆ ಸೇರ್ಪಡೆಗೊಳಿಸಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿ ಪ್ರಕಾರ, ಪಶ್ಚಿಮಘಟ್ಟ ವ್ಯಾಪ್ತಿಯ ಒಟ್ಟು 56,000 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯದಲ್ಲಿ ಕರ್ನಾಟಕದ 10 ಜಿಲ್ಲೆಗಳ 33 ತಾಲೂಕು, 1,533 ಗ್ರಾಮ ಪಂಚಾಯತ್ ವ್ಯಾಪ್ತಿಯ 20,668 ಚದರ ಕಿ.ಮೀ ಪ್ರದೇಶ ಸೇರಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶೇ 37ರಷ್ಟು ಭಾಗವನ್ನು ಈ ವ್ಯಾಪ್ತಿಗೆ ತಂದಿರುವುದು ಸ್ಥಳೀಯರ ಜೀವನೋಪಾಯಕ್ಕೆ ಕಂಟಕವಾಗಿದೆ. ಪರಿಸರ ಸೂಕ್ಷ್ಮ ವಲಯವೆಂಬ ನೆಪದಲ್ಲಿ ಸ್ಥಳೀಯರು ಮನೆ ನಿರ್ಮಿಸಲು, ಕಷಿ-ತೋಟಗಾರಿಕೆ ಚಟುವಟಿಕೆ ನಡೆಸಲು ಹಾಗೂ ಮೂಲಸೌಕರ್ಯ ಅಭಿವದ್ಧಿಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿ ಕಿರುಕುಳ ನೀಡುತ್ತಿದ್ದಾರೆ. ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವವರೆಗೆ ಅರಣ್ಯ ಇಲಾಖೆಯು ಕಷಿಕರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಬಾರದು ಎಂದರು.
ರಾಜ್ಯ ಸರಕಾರ ಈಗಾಗಲೇ ಈ ವರದಿಯನ್ನು ಹಲವು ಬಾರಿ ತಿರಸ್ಕರಿಸಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಈ ವಿಷಯದಲ್ಲಿ ಸಮನ್ವಯದ ಕೊರತೆಯಿದೆ. ಕರಾವಳಿ ಭಾಗವನ್ನು ಪ್ರತಿನಿಧಿಸುವ ಸಂಸದರು ಹಾಗೂ ಶೋಭಾ ಕರಂದ್ಲಾಜೆ ಸೇರಿದಂತೆ ಕೇಂದ್ರ ಸಚಿವರು ಧ್ವನಿ ಎತ್ತಬೇಕು. ಕೇಂದ್ರ ಸರಕಾರದ ಮಟ್ಟದಲ್ಲಿ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ಪಂಚಾಯಿತ್ ಗಳು, ರೈತರು ಮತ್ತು ಪರಿಸರ ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ ವೈಜ್ಞಾನಿಕ ದತ್ತಾಂಶ ಹಾಗೂ ವಾಸ್ತವ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದವರು ಸ್ಪಷ್ಟಪಡಿಸಿದರು.
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕೆಲವು ಸ್ವಹಿತಾಶಕ್ತಿ ಇರುವವರು ವಿರೋಧ ಮಾಡುತ್ತಾರೆ. ಜನಸಾಮಾನ್ಯರೆಲ್ಲರೂ ಇದಕ್ಕೆ ಪರವಾಗಿದ್ದಾರೆ. ನಾವು ಈಗಾಗಲೇ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ವಾಸ್ತವ ವಿವರ ಮುಂದಿಟ್ಟಿದ್ದೇವೆ. ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದು, ಶೀಘ್ರವೇ ಸಮಿತಿ ರಚಿಸಿ ಕಳುಹಿಸಿಕೊಡಲಿದ್ದಾರೆ. ಈ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದರು.
ಮಂಗಳೂರು ರೈಲ್ವೇ ನೈರುತ್ಯ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಇದು ನಮ್ಮ ಹಲವು ವರ್ಷಗಳ ಹೋರಾಟದ ಫಲವಾಗಿದೆ. ಇದರಿಂದ ಕೇರಳಕ್ಕೆ ಯಾವ ನಷ್ಟವಿಲ್ಲ. ರೈಲ್ವೇ ಸಾರಿಗೆ ಜನಸ್ನೇಹಿಯಾಗಿರಬೇಕು, ಆದರೆ ಪಾಲಕ್ಕಾಡ್ನ ಮಲತಾಯಿ ಧೋರಣೆಯಿಂದ ನಮಗೆ ಈವರೆಗೆ ಅನ್ಯಾಯವಾಗಿದೆ. ಇದೀಗ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಕಾರಣ ರೈಲ್ವೇಗೆ ಸಂಬಂಧಿಸಿ ನಮ್ಮ ಬೇಡಿಕೆ ಈಡೇರಲು ಅನುಕೂಲವಾಗಿದೆ ಎಂದು ಐವನ್ ಡಿಸೋಜ ಹೇಳಿದರು.













