ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರ್ಕಾರದ ಆಕ್ಷೇಪಣೆ ಬಹಿರಂಗಪಡಿಸಲಿ: ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಆಕ್ಷೇಪಣೆಗಳ ಪ್ರತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕುಂದಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಏಳನೇ ಕರಡು ಅಧಿಸೂಚನೆಯನ್ನು ಬಿಡುಗಡೆಗೊಳಿಸಿದ್ದು, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಿದೆ. ಈಗಾಗಲೇ ಆರು ಬಾರಿ ಕರಡು ಅಧಿಸೂಚನೆಗಳು ಹೊರಬಂದಿದ್ದರೂ, ರೈತರು ಹಾಗೂ ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳ ಪ್ರಮುಖ ಬೇಡಿಕೆಯಾಗಿರುವ ಭೌತಿಕ ಸರ್ವೇ ಕಾರ್ಯ ಮಾತ್ರ ಇದುವರೆಗೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಸದರು ಹಾಗೂ ಶಾಸಕರು ಕೇವಲ ಅಧಿಕಾರಿಗಳನ್ನು ಕೂರಿಸಿಕೊಂಡು ಸಭೆ ನಡೆಸುವ ಕಾಟಾಚಾರವನ್ನು ನಿಲ್ಲಿಸಬೇಕು. ಸಭೆಗಳಲ್ಲಿ ಅಧಿಕಾರಿಗಳು ನೀಡುವ ಹಾರಿಕೆಯ ಉತ್ತರಗಳಿಗೆ ಸಮ್ಮತಿ ಸೂಚಿಸುವ ಬದಲು, ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿರುವ ಆಕ್ಷೇಪಣೆಯ ಸಂಪೂರ್ಣ ಪ್ರತಿಯನ್ನು ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಆಕ್ಷೇಪಣೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ, ಕೇವಲ ಸಭೆಗಳನ್ನು ನಡೆಸಿ ಭರವಸೆ ನೀಡುವುದಾದರೆ, ಅದು ರೈತರು ಹಾಗೂ ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ನಿವಾಸಿಗಳ ಕಣ್ಣೀರೊರೆಸುವ ತಂತ್ರದ ಭಾಗವಾಗಲಿದೆ. ಇದರಿಂದ ಜನಸಾಮಾನ್ಯರ ಬೇಡಿಕೆಗಳು ಹಾಗೂ ಆಗ್ರಹಗಳು ಈಡೇರುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.













