ಕಂಡ್ಲೂರು ಹಳೆ ಸೇತುವೆ ನೆಲಸಮದ ಹುನ್ನಾರದ ಹಿಂದೆ ಭ್ರಷ್ಟಾಚಾರದ ಅನುಮಾನ : ಕೆ. ವಿಕಾಸ್ ಹೆಗ್ಡೆ
ಕುಂದಾಪುರ ತೀರ್ಥಹಳ್ಳಿ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಹಾದು ಹೋಗುವ ವರಾಹಿ ನದಿಗೆ ಅಡ್ಡಲಾಗಿ ಇರುವ ಬಳ್ಕೂರು – ಕಂಡ್ಲೂರು ಸಂಪರ್ಕದ ಹೊಸ ಸೇತುವೆ ನಿರ್ಮಾಣಕ್ಕೆ ಹಳೆ ಸೇತುವೆ ನೆಲಸಮ ಮಾಡುವ ಲೋಕೋಪಯೋಗಿ ಇಲಾಖೆಯ ಯೋಚನೆಯ ಹಿಂದೆ ಕೋಟ್ಯಂತರ ರೂಪಾಯಿ ಗುಜರಿ ಹಣ ಹೊಡೆಯುವ ಭ್ರಷ್ಟಾಚಾರದ ಹುನ್ನಾರವಿದೆ ಎಂದು ಕೆಪಿಸಿಸಿ ಸಂಯೋಜಕ ಕೆ. ವಿಕಾಸ್ ಹೆಗ್ಡೆ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿಯಿದೆ. ಆದರೆ ಇಲಾಖೆ ಯೋಜನೆಯ ಅಂದಾಜು ಮೊತ್ತ, ನೀಲನಕ್ಷೆ ಇತ್ಯಾದಿ ತಯಾರು ಮಾಡುವಾಗ ಸಾರ್ವಜನಿಕರನ್ನು, ಜನಪ್ರತಿನಿದಿನಗಳನ್ನು ಸಂಪರ್ಕ ಮಾಡದೆ ಇರುವುದು ಇಲಾಖೆಯ ಬೇಜವಾಬ್ದಾರಿ ತನವಾಗಿದೆ. ಇಲಾಖೆ ಹೊಸ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಹಳೆ ಸೇತುವೆ ಒಡೆಯುತ್ತೇವೆ ಎನ್ನುವ ಏಕೈಕ ಕಾರಣ ಸೇತುವೆ ಒಡೆಯಲು ಒಂದಷ್ಟು ಕೋಟಿ ಸಾರ್ವಜನಿಕ ಹಣ ದುರುಪಯೋಗ ಮಾಡಲು ಹಾಗೂ ಹಳೆ ಸೇತುವೆಯಲ್ಲಿನ ಕಬ್ಬಿಣ ಮುಂತಾದ ಕೋಟ್ಯಂತರ ರೂಪಾಯಿ ಗುಜರಿ ಹಣವನ್ನು ಟೆಂಡರ್ ಪಡೆದ ಗುತ್ತಿಗೆದಾರರ ಜೊತೆ ಸೇರಿ ಲಪಟಾಯಿಸುವ ವ್ಯವಸ್ಥಿತ ಹುನ್ನಾರದಿಂದ ಹೊಸ ಸೇತುವೆ ನಿರ್ಮಾಣಕ್ಕೆ ಹಳೆ ಸೇತುವೆ ಒಡೆಯಬೇಕು ಎನ್ನುವ ಹಠಕ್ಕೆ ಬಿದ್ದಿದೆ ವಿನಃ ಬೇರೆ ಯಾವುದೇ ಕಾರಣವಲ್ಲಾ ಎಂದು ಪತ್ರಿಕಾ ಹೇಳಿಕೆ ಮೂಲಕ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.













