ಸರ್ಕಾರಿ ಸ್ಥಳದಲ್ಲಿನ ವಾಸಿಗಳ ಮೇಲೆ ಅನಗತ್ಯ ಕ್ರಮ ಸರಿಯಲ್ಲ – ಕೆ. ವಿಕಾಸ್ ಹೆಗ್ಡೆ

Spread the love

ಸರ್ಕಾರಿ ಸ್ಥಳದಲ್ಲಿನ ವಾಸಿಗಳ ಮೇಲೆ ಅನಗತ್ಯ ಕ್ರಮ ಸರಿಯಲ್ಲ – ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ್ತವ್ಯವಿದ್ದು ಇಲ್ಲಿಯ ತನಕ ಗ್ರಾಮ ಪಂಚಾಯತುಗಳಿಗೆ ಅರ್ಜಿ ಸಲ್ಲಿಸಿ 11 ಬಿ ಪಡೆಯದೆ ಇರುವವರ ಮಾಹಿತಿಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಚೇರಿಯಿಂದ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಕಳುಹಿಸಿಸುವಂತೆ ಆದೇಶಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಂಯೋಜಕರಾದ ಕೆ. ವಿಕಾಸ್ ಹೆಗ್ಡೆ ತಿಳಿಸಿರುತ್ತಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಕೇವಲ ಮಾಹಿತಿ ಕೇಳಿದರೆ ತೊಂದರೆಯಿಲ್ಲಾ ಆದರೆ ಗ್ರಾಮ ಪಂಚಾಯತ್ ಗಳ ಮೂಲಕ ಮಾಹಿತಿ ಪಡೆದು 11 ಬಿ ಪಡೆಯದೆ ಇರುವ ಕುಟುಂಬಗಳ ಮನೆ ಸಂಖ್ಯೆ, ವಿದ್ಯುತ್ ಸಂಪರ್ಕ, ಪಡಿತರ ಚೀಟಿ ಇತ್ಯಾದಿಗಳನ್ನು ಹಿಂಪಡೆಯಲು ಹಾಗೂ ಹೊಸದಾಗಿ ನೀಡಬಾರದು ಎಂದು ಆದೇಶ ಮಾಡಲು ಹೊರಟರೆ ಇದರಿಂದ ಸರ್ಕಾರಿ ಸ್ಥಳದಲ್ಲಿ ವಾಸ್ತವ್ಯವಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆಯಿದೆ.

ಈಗಾಗಲೇ ಮುಖ್ಯಮಂತ್ರಿಗಳು ಸಹ ಸರ್ಕಾರಿ ಸ್ಥಳದಲ್ಲಿ ಅಕ್ರಮ ನಿವೇಶನದ ಮೂಲಕ ಮನೆ ಕಟ್ಟಿಕೊಂಡವರ ನಿವೇಶನವನ್ನು ಸಕ್ರಮ ಮಾಡಿ ಅವರಿಗೆ ಮನೆ ಸಂಖ್ಯೆ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಆದೇಶ ಕೂಡ ಮಾಡಿದ್ದಾರೆ. ಹಾಗೂ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸರ್ಕಾರಿ ಸ್ಥಳದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುವ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಸರ್ಕಾರ ಮನೆಗಳನ್ನು ಸಹ ನೀಡಿತ್ತು. ಸಂವಿಧಾನದ ಆಶಯದಂತೆ ಮೂಲಭೂತ ಸೌಕರ್ಯಗಳಲ್ಲಿ ಮೊದಲನೆಯದು ವಸತಿ. ಇಂದು ಸರ್ಕಾರಿ ಸ್ಥಳದಲ್ಲಿ ವಾಸಿಸುವವರು ಆರ್ಥಿಕವಾಗಿ ಹಿಂದುಳಿದವರು. ಇಂತಹವರಿಗೆ ನಿಯಮಗಳ ಸಡಿಲಿಕೆ ಮೂಲಕ ಬದುಕುವ ಅವಕಾಶವನ್ನು ನೀಡಬೇಕೆಂದು ಹಾಗೂ ಎಲ್ಲಿಯಾದರೂ ಇವರ ಮೇಲೆ ಗದಾಪ್ರಹಾರ ಮಾಡಲು ಹೊರಟರೆ ಉಗ್ರ ಹೋರಾಟ ಮಾಡುತ್ತೆವೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.


Spread the love
Subscribe
Notify of

0 Comments