ಗಾಳಕ್ಕೆಲ್ಲಾ ಬಾಯಿ ಹಾಕುವ ಜಾತಿ ನಮ್ಮದಲ್ಲ; ಕಾಂಗ್ರೆಸ್ ತೊರೆಯೊಲ್ಲ – ನನ್ನನ್ನು ಬಿಟ್ಪಿಡಿ ; ಪ್ರಮೋದ್

Spread the love

ಗಾಳಕ್ಕೆಲ್ಲಾ ಬಾಯಿ ಹಾಕುವ ಜಾತಿ ನಮ್ಮದಲ್ಲ; ಕಾಂಗ್ರೆಸ್ ತೊರೆಯೊಲ್ಲ – ನನ್ನನ್ನು ಬಿಟ್ಪಿಡಿ ; ಪ್ರಮೋದ್

ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಗಾಳಕ್ಕೆ ಬಾಯಿ ಹಾಕುವ ಜಾತಿ ನಮ್ಮದಲ್ಲ ಅಂತ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಕಡಿವಾಣ ಹಾಕಿದ ಅವರು, ನನ್ನನ್ನು ಬಿಟ್ಟುಬಿಡಿ. ಅನಂತಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಒಂದು ವೇಳೆ ನಾನು ಅವರನ್ನು ಭೇಟಿಯಾಗದಿದ್ದರೂ ಅದೊಂದು ಸುದ್ದಿಯಾಗುತ್ತಿತ್ತು. ನಾವಿಬ್ಬರು ಕೋಣೆಯೊಳಗೆ ಕುಳಿತು ಮಾತನಾಡಲಿಲ್ಲ. ಇದಕ್ಕೆ ಅಪಾರ ಅರ್ಥ ಕಲ್ಪಿಸೋದು ಬೇಡ. ನಾನು ನಿನ್ನೆ ಐಬಿಗೆ ಆಕಸ್ಮಿಕವಾಗಿ ಹೋಗಿದ್ದೆ,  ಐಬಿಗೆ ಹೋದಾಗ ತುಂಬಾ ಕಾರುಗಳಿತ್ತು ಏನು ಇಷ್ಟು ಕಾರುಗಳು ಎಂದು ಕೇಳಿದಾಗ ಅನಂತ್ ಕುಮಾರ್ ಬಂದಿದ್ದಾರೆ ಎಂಬ ಮಾಹಿತಿ ತಿಳಿಯಿತು. ಅನಂತಕುಮಾರ್ ಒರ್ವ ಕೇಂದ್ರದ ಮಂತ್ರಿ ಅಲ್ಲಿರುವಾಗ ಒಂದು ಸೌಜನ್ಯದ ಭೇಟಿ ಮಾಡದೆ ವಾಪಾಸು ಹೋದರೆ ಮತ್ತೆ ಅದೇ ದೊಡ್ಡ ಸುದ್ದಿಯಾಗುತ್ತದೆ. ಈಗ ಸೌಜನ್ಯಕ್ಕೆ ಭೇಟಿ ಮಾಡಿದರೆ ಅದು ಕೂಡ ಸುದ್ದಿಯಾಗಿದೆ. ನಾನೇನು ಅವರ ಜೊತೆ ಕೋಣೆಯಲ್ಲಿ ಕೂತು ಇಬ್ಬರೇ ಮಾತನಾಡಿಲ್ಲ ಬದಲಾಗಿ ಅಲ್ಲಿ ನಾನು ಹೋದಾಗ ಗೋಡಂಬಿ ಬೆಳೆಗಾರರು ಕೂಡ ಇದ್ದರು. ಆಗ ನಾನು ಹೋಗಿ ಅನಂತಕುಮಾರ್ ಅವರಿಗೆ ವಿಶ್ ಮಾಡಿ ವಾಪಾಸು ಬಂದಿದ್ದೇನೆ ಅಷ್ಟೇ.

ಕಾಂಗ್ರೆಸ್ ತೊರೆಯುವ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ ಎಂದು ಎಷ್ಟೂ ಬಾರಿ ಸ್ಪಷ್ಟೀಕರಣ ನೀಡಿದರೂ ಕೂಡ ನನ್ನ ಬಗ್ಗೆ ಕೆಲವೊಂದು ಮಾಧ್ಯಮದವರು ಅಪಪ್ರಚಾರ ಮಾಡಿದರೆ ನಾನು ಅಸಹಾಯಕ. ಗುಪ್ತವಾಗಿ ಅಮೀತ್ ಶಾ ಅವರನ್ನು ಭೇಟಿಯಾಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದುವರೆಗೆ ನಾನು ಅಮಿತ್ ಶಾ ಅವರ ಮುಖವನ್ನೇ ನೋಡಿಲ್ಲ ನೀವು ನೋಡಿದ್ದಿರಾ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದರು. ಮಾಧ್ಯಮದವರು ನಾವು ಟಿವಿಯಲ್ಲಿ ನೋಡಿದ್ದೇವೆ ಎಂದದಕ್ಕೇ ನಾನೂ ಟಿವಿಯನ್ನೇ ನೋಡುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಯಾವ ಗಾಳವನ್ನು ಯಾರೂ ಹಾಕಿಲ್ಲ. ನಾನು ಕೂಡ ಗಾಳಕ್ಕೆ ಬಾಯಿ ಹಾಕುವ ಜಾತಿಯವನಲ್ಲ ಅಂತ ಸ್ಪಷ್ಟನೆ ನಿಡಿದ್ದಾರೆ.

ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಓಡಾಡುತ್ತಿದೆ. ಇದಕ್ಕೆ ಸಾಕ್ಷಿಯಂತೆ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತನಾಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಈ ಫೋಟೋ ರಾಜಕೀಯ ವಲಯದ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅನಂತ್ ಕುಮಾರ್ ಅವರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಉಳಿದಿದ್ದರು. ಆ ಸಂದರ್ಭದಲ್ಲಿಯೆ ಪ್ರಮೋದ್ ಅವರೂ ಪ್ರವಾಸಿ ಮಂದಿರಕ್ಕೆ ಹೋಗಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದರು.

ಈ ಸಂದರ್ಭ ಬಿಜೆಪಿ ಮುಖಂಡ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಮತ್ತಿತರರು ಇದ್ದರು. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ಮಹತ್ವ ಪಡೆದಿತ್ತು.


Spread the love

1 Comment

  1. Manorama had joined BJP and won her seat from Udipi parliamentary constituency.
    Media may be trying to see if some thing like that is happening.
    Pamma has no problem in Cong I. Why would he leave Cong I?

Comments are closed.