ಮಿಥುನ್ ರೈ ಗೆಲ್ಲಿಸುವಲ್ಲಿ ಒಗ್ಗಟ್ಟಾಗಿ ಶ್ರಮಿಸುತ್ತೆವೆ – ಕಾಂಗ್ರೆಸ್ & ಜೆಡಿಎಸ್ ನಾಯಕರು

Spread the love

ದಕ ಜಿಲ್ಲೆಗೆ ಕೆಲಸ ಮಾಡುವ ಸಂಸದ ಬೇಕು, ಮಿಥುನ್ ರೈ ಗೆಲ್ಲಿಸುವಲ್ಲಿ ಒಗ್ಗಟ್ಟಾಗಿ ಶ್ರಮಿಸುತ್ತೆವೆ – ಕಾಂಗ್ರೆಸ್ & ಜೆಡಿಎಸ್ ನಾಯಕರು

ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಲು ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಚುನಾವಣಾ ಸಮಿತಿ ರಚನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಜಿಲ್ಲಾಧ್ಯಕ್ಷರು ಜಂಟಿ‌ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಂಟಿ ಸಭೆ, ಸಮಾವೇಶ ಹಾಗೂ ಮತಯಾಚನೆ ಮಾಡುತ್ತೇವೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸೋಲಿಸುವುದೇ ನಮ್ಮ‌ ಗುರಿ. 27 ವರ್ಷಗಳ ಕಾಲ ಬಿಜೆಪಿ ಕೈಯಲ್ಲಿದ್ದ ಕ್ಷೇತ್ರವನ್ನು ಕೈವಶ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯುವ ನಾಯಕತ್ವಕ್ಕೆ ಮಣೆ ಹಾಕಿದ್ದು, ಮಿಥುನ್ ರೈಯವರನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಮಾರ್ಚ್ 25ರ ಸೋಮವಾರ ಬೆಳಗ್ಗೆ 10:30ಕ್ಕೆ ಪುರಭವನದಲ್ಲಿ ಜಂಟಿ ಸಮಾವೇಶ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಬಿಜೆಪಿ ಸರಕಾರ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಜನಪರ ಯೋಜನೆಗಳನ್ನು ನೀಡುವಲ್ಲಿ ವಿಫಲವಾಗಿದೆ. ನಮ್ಮ ಜಿಲ್ಲೆಗೆ ಲಭಿಸಿದ ಬಿಜೆಪಿ ಸಂಸದರು ಕೂಡ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಜಿಲ್ಲೆಯಲ್ಲಿ ಅಫೂರ್ಣವಾಗಿರು ಫ್ಲೈ ಒವರ್ ಗಳ ಬಗ್ಗೆ ಪ್ರತಿ ಬಾರಿ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಯಾವುದೆ ಜನಪಯೋಗಿ ಕೆಲಸಗಳನ್ನು ಮಾಡುವಲ್ಲಿ ಅವರ ಕೊಡುಗೆ ಶೂನ್ಯ. ಬಿಜೆಪಿಯವರು ಜಿಲ್ಲೆಯ ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿಯವರಿಗೆ ಮಾರಿದ್ದು ಬೇರೆನೂ ಮಾಡಿಲ್ಲ ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಸಮರ್ಥ ಯುವ ನಾಯಕನ್ನು ಮೈತ್ರಿ ಅಭ್ಯರ್ಥಿಯಾಗಿ ಆರಿಸಿದ್ದು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಜೆಡಿಎಸ್ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರ ಹಲವಾರು ಅಭಿವೃದ್ಧಿಪರ ಯೋಜನೆಗಳನ್ನು ನೀಡಿದ್ದು ಅದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಮನ ಹೆಸರಿನಲ್ಲಿ ಚುನಾವಣೆಗೆ ಗೆದ್ದದ್ದು ಬಿಟ್ಟರೆ ಬೇರೆ ಯಾವುದೇ ಸಾಧನೆಗಳನ್ನು ಮಾಡಿಲ್ಲ. ನಳಿನ್ ಕುಮಾರ್ ಅವರನ್ನು ಸೋಲಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಮರನಾಥ ಶೆಟ್ಟಿ, ಅಭಯಚಂದ್ರ ಜೈನ್, ಅಭ್ಯರ್ಥಿ ಮಿಥುನ್ ರೈ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.


Spread the love

1 Comment

  1. Naleen Kumar Solisuvude Avara guri. Kshetrada kelasa maduva guri avarigilla antha aithu. Hagiddalli, Ondu vele Rai geddare, koodale rajiname kodabeku ekendare, mathu kelasa madalu bere yaradarannu MP madabeku.

Comments are closed.