ಕೌಟುಂಬಿಕ ಸಮಸ್ಯೆಯಿಂದ ಬೇರೆಯಾದವರು ಲೋಕ ಅದಾಲತ್ ನಲ್ಲಿ ಒಗ್ಗೂಡಿದ ಗಂಡ ಹೆಂಡತಿ
ಮಂಗಳೂರು: ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಭಟ್ ಕೆ, ಅದಲತ್ ಸದಸ್ಯರಾದ ಕೆ ಎಸ್ ಗೌರಿ ರವರು ಕೌಟುಂಬಿಕ ಸಮಸ್ಯೆಯಿಂದ ಬೇರೆ ಬೇರೆಯಾದ ಗಂಡ ಹೆಂಡತಿಯನ್ನು ಒಟ್ಟುಗೂಡಿಸಿದ ಪ್ರಸಂಗ ನಡೆಯಿತು.
ಕಾವೂರು ನಿವಾಸಿ ಹನುಮಂತ ಹೂಗಾರ್ ಮತ್ತು ಬಿಜೈ ನಿವಾಸಿ ಸಾವಿತ್ರಿ ಹೂಗಾರ್ ರವರು ಮದುವೆಯಾಗಿ 16 ವರ್ಷ ಆಗಿದ್ದು ಎರಡು ಮಕ್ಕಳಿರುತ್ತಾರೆ. ಕೆಲವೊಂದು ಕೌಟುಂಬಿಕ ಸಮಸ್ಯೆಯಿಂದ ಇಬ್ಬರು ಬೇರೆಬೇರೆಯಾಗಿ ವಾಸಿಸುತ್ತಿದ್ದರು ಹನುಮಂತ ಹೂಗಾರ್ ಅವರು ನನಗೆ ಹೆಂಡತಿ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿದಾರ ಹನುಮಂತ ಹೂಗಾರ್ ಪರವಾಗಿ ನ್ಯಾಯವಾದಿ ಅನಿಶಾ ಡಿಸೋಜ ಮತ್ತು ಪ್ರತಿವಾದಿ ಸಾವಿತ್ರಿ ಹೂಗಾರ್ ಪರವಾಗಿ ನ್ಯಾಯವಾದಿ ದಿನಕರ್ ಶೆಟ್ಟಿ ಅವರು ವಕಾಲತು ವಹಿಸಿದ್ದರು.
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜೈಬುನ್ನಿಸ್ಸ ಉಪಸ್ಥಿತರಿದ್ದರು. ವೈವಾಹಿಕ ಜೀವನದ ಬಗ್ಗೆ ಸವಿಸ್ತಾರವಾಗಿ ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನ ನಡೆಸುವ ಬಗ್ಗೆ ತಿಳುವಳಿಕೆ ಹೇಳಿ ಅವರ ನಡುವೆ ಇದ್ದ ಸಮಸ್ಯೆಯನ್ನು ಬಗೆಹರಿಸಿ ಒಂದುಗೂಡಿಸಿದರು. ನ್ಯಾಯಾಧೀಶರ ಸಲಹೆ ಮತ್ತು ತಿಳುವಳಿಕೆಯನ್ನು ಅರ್ಥಮಾಡಿ ಕೊಂಡು ಗಂಡ ಹೆಂಡತಿ ಮುಂದಿನ ಜೀವನ ಮಕ್ಕಳ ಜೊತೆ ಸಂತೋಷದಿಂದ ಬಾಳಲು ನಿರ್ಧರಿಸಿದರು. ನಂತರ ನ್ಯಾಯಾಧೀಶರ ಸಮ್ಮುಖದಲ್ಲಿ ಹೂವಿನ ಮಾಲೆ ಬದಲಿಸಿ, ಎಲ್ಲರೂ ಶುಭ ಹಾರೈಸಿದರು.