ಗದ್ದೆಗಿಳಿದು ನೇಜಿ ನಾಟಿ ಮಾಡಿದ ಐಸಿವೈಎಮ್ ಕಟಪಾಡಿ ಯುವಜನರು

Spread the love

ಗದ್ದೆಗಿಳಿದು ನೇಜಿ ನಾಟಿ ಮಾಡಿದ ಐಸಿವೈಎಮ್ ಕಟಪಾಡಿ ಯುವಜನರು

ಉಡುಪಿ: ಭಾರತೀಯ ಕಥೊಲಿಕ್ ಯುವ ಸಂಚಾಲನ ಮತ್ತು ಯುವ ವಿದ್ಯಾರ್ಥಿ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಆದೇಶದಂತೆ, ಆಧುನಿಕ ಕಾಲದಲ್ಲಿ ಕೃಷಿಯಿಂದ ದೂರ ಸರಿದಿರುವ ಯುವಜನರು, ಅದರ ಬಗ್ಗೆ ಮಾಹಿತಿ ಮತ್ತು ಬೇಸಾಯ ಮಾಡಬೇಕು ಎಂಬ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚ್ ಕಟಪಾಡಿ ಇದರ ಐಸಿವೈಎಮ್ ಮತ್ತು ವೈಸಿಎಸ್ ಘಟಕದ ಸದಸ್ಯರು ಉತ್ಸಾಹದಿಂದ ನಡೆಸುವುದರ ಮೂಲಕ ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಒಂದಿಷ್ಟು ಹೊತ್ತು ಬ್ರೇಕ್ ನೀಡಿ ಗದ್ದೆಗೆ ಇಳಿಯುವುದರ ಮೂಲಕ ಯುವಜನರಿಗೆ ಮಾದರಿಯಾದರು.

ಕಟಪಾಡಿ ಮಣಿಪುರ ಪರಿಸರದ ಹಿರಿಯ ಕೃಷಿ ಕುಟುಂಬವಾದ ದಿವಂಗದ ಲೊರೇನ್ಸ್ ಅವರ ಪತ್ನಿ ಮಾರ್ಸೆಲಿನ್ ಡಿಸೋಜಾರವರ ಗದ್ದೆಯಲ್ಲಿ ನಾಟಿಯನ್ನು ಸ್ವತಃ ನೆಡುವುದರ ಮೂಲಕ ಕಾರ್ಯಕ್ರಮವನ್ನು ಮಾರ್ಸೆಲಿನ್ ಡಿಸೋಜಾ ಅವರ ಮೊಮ್ಮಕ್ಕಳೊಂದಿಗೆ ಉದ್ಘಾಟಿಸಿದರು.

ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚಿನ ಧರ್ಮಗುರುಗಳಾದ ವಂ| ರೋನ್ಸನ್ ಡಿಸೋಜಾರವರು ಸ್ವತಃ ಗದ್ದೆಗೆ ಇಳಿದು ಯುವಜನರ ಜೊತೆಯಲ್ಲಿ ನೇಜಿಯನ್ನು ನಾಟಿ ಮಾಡಿದರು.

ಈ ವೇಳೆ ಮಾತನಾಡಿದ ವಂ| ರೋನ್ಸನ್ ಡಿಸೋಜಾ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರಿಲ್ಲದೆ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ಕೂಲಿ ಕೊಟ್ಟು ಕೃಷಿ ನಡೆಸಲು ಸಾಧ್ಯವಿಲ್ಲದೆ ಕೃಷಿ ಭೂಮಿ ಹಡಿಲು ಬೀಳುತ್ತಿದೆ. ಕೃಷಿಕ ಕುಟುಂಬಗಳ ಯುವ ಜನರು ಕೆಲಸಕ್ಕಾಗಿ ನಗರದತ್ತ ಹೊರಟಿರುವ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯುತ್ತಿದ್ದು ಇದರಿಂದ ಯುವಜನರಿಗೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಲು ಸಾಧ್ಯವಾಗುತ್ತದೆ ಎಂದರು

ಹಿರಿಯ ಕೃಷಿಕರಾದ ಲೆಸ್ಲಿ ಸುವಾರಿಸ್, ಐಸಿವೈಎಮ್ ಕಟಪಾಡಿ ಘಟಕದ ಅಧ್ಯಕ್ಷೆ ಲಿವಿಯಾ ಪಿರೇರಾ, ಕಾರ್ಯದರ್ಶಿ ಮೆಲಿಷಾ ಡಿಸೋಜಾ, ಸಚೇತಕರಾದ ವಿಲ್ಫ್ರೇಡ್ ಲೂವಿಸ್ ಮತ್ತು ಬ್ರಾಯನ್ ಕೊರೆಯಾ ಉಪಸ್ಥಿತರಿದ್ದರು


Spread the love