ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, 25ನೇ ವಾರ್ಷಿಕ ಮಹಾಸಭೆ
ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲ ಕಾರ್ಯಕರ್ತರು ತಮ್ಮ ಜವಾಬ್ಧಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮುಂಬಯಿ ಸಮಿತಿ ಹಾಗೂ ಜಿಲ್ಲೆಗಳ ಸಮಿತಿಯ ಎಲ್ಲರೂ ಅವರವರ ಕಾರ್ಯವನ್ನು ಸಮಿತಿಯ ಹೆಸರಿಗೆ ಧಕ್ಕೆಯಾಗದ ರೀತಿಯಲ್ಲಿ ಯಶಸ್ವಿಯಾಗಿ ನೆರವೇಸುತ್ತಿರುವುದು ಅಭಿನಂದನೀಯ. ಇದೇ ರೀತಿ ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ನಮ್ಮ ಸಂಘಟನೆಯನ್ನು ಮುನ್ನಡೆಸೋಣ. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಧಾರವನ್ನು ಸಂಸ್ಥಾಪಕರ ಮಾರ್ಗದರ್ಶನದಂತೆ ಕೈಗೊಂಡಿರುವ ಸಾಧ್ಯತೆಯಿದೆ. ಆದರೂ ನಮಗೆ ನಮ್ಮ ಹಿರಿಯ ಸದಸ್ಯರು ಸಲಹೆ ಸೂಚನೆ ನೀಡುದಾದರೆ ಸ್ವಾಗತಾರ್ಹ. ಕಳೆದ 25 ವರ್ಷಗಳಿಂದ ಸಮಿತಿಯು ಜಿಲ್ಲೆಗಳಿಗೆ ವಿದ್ಯತ್, ಹೆದ್ದಾರಿ, ರೈಲು, ಉದ್ಯೋಗಾವಕಾಶ ನೀಡಿದ್ದು ಜನರು ಇದನ್ನು ಗಮನಿಸಬೇಕಾಗಿದೆ. ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತಿದ್ದು ಸಮಿತಿಯ ಘಟನೆಯ ತಿದ್ದುಪಡಿಯ ಅಗತ್ಯವಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ನುಡಿದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ ಮಹಾಸಭೆಯು ಮುಂಬಯಿ ಸಾಕಿನಾಕಾದ, ಪೆನಿನ್ಸುಲಾ ಗ್ರಾಂಡ್ ಹೋಟೆಲು, ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ, ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತವರ್ಷದ ವಾರ್ಷಿಕ ಮಹಾಸಭೆಯ ವರದಿ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ಅವರು ಗತ ವರ್ಷದ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಸಮಿತಿಯ ಸಲಹೆಗಾರರಾದ ಪ್ರವೀಣ್ ಬೋಜ ಶೆಟ್ಟಿ, ಸೂರ್ಯಕಾಂತ್ ಜಯ ಸುವರ್ಣ ಮತ್ತು ಲಕ್ಷ್ಮಣ್ ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.
ಸಭಿಕರ ಪರವಾಗಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಹಾಗೂ ಸಮಿತಿಯ ಘಟನೆಯ ತಿದ್ದುಪಡಿಯ ಪ್ರಮುಖರಾದ ಶ್ರೀನಿವಾಸ ಸಾಫಲ್ಯರು ಎಲ್ಲಾ ಸಮುದಾಯದವರನ್ನು ಒಂದೆಡೆ ಸೇರಿಸಿ, ಒಂದು ಸಂಘಟನೆಯನ್ನು ರೂಪಿಸಿ, ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ನಮ್ಮ ಸಮಿತಿಯ ಕಾರ್ಯ ನಿಜಕ್ಕೂ ಪ್ರಶಂಸನೀಯವಾಗಿದೆ. ಇದಕ್ಕೆ ಪ್ರಮುಖ ಕಾರಣರಾಗಿರುವವರು ನಮ್ಮ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು. ಸಮಿತಿಯು ಯಾವುದೇ ನಿರ್ಣಯವನ್ನು ಕೈಗೊಳ್ಳುವಾಗ, ಅದನ್ನು ಸಮಿತಿಯ ಸಭೆಯಲ್ಲಿ ಮಂಜೂರು ಮಾಡುವ ಸಂಪ್ರದಾಯವಿದ್ದು, ಇದರ ಮೂಲಕ ಎಲ್ಲ ಸದಸ್ಯರು ಅದರ ಬಗ್ಗೆ ಪೂರ್ವ ಮಾಹಿತಿ ಹೊಂದಿರುತ್ತಾರೆ . ಸಮಿತಿಯ ಘಟನೆಯ ತಿದ್ದುಪಡಿಯ ಉದ್ದೇಶ ಹಾಗೂ ಅವಶ್ಯಕತೆ ಕುರಿತು ಸೂಕ್ತವಾದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.
ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿಯವರು ಮಾತನಾಡುತ್ತಾ ಜಿಲ್ಲೆಗಳ ಅಭಿವೃದ್ದಿಯಲ್ಲಿ ಧಾರ್ಮಿಕ ಕೇಂದ್ರಗಳು ಮಹತ್ತರವಾದ ಕಾರ್ಯ ನಿರ್ವಹಿಸುತ್ತದೆ. ಅದಕ್ಕಾಗಿ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ರೀತಿಯಲ್ಲಿ ಮಾರಕವಾಗಬಾರದು. ನಮ್ಮ ಜಿಲ್ಲಾ ಸಮಿತಿಯು ಜಿಲ್ಲೆಗಳ ಅಭಿವೃದ್ದಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು ಜಿಲ್ಲಾ ಸಮಿತಿಯ ಕಾರ್ಯ ಪ್ರಶಂಸನೀಯ ಎಂದರು.
ನ್ಯಾ. ಶಶಿಧರ ಕಾಪು, ಉಪಾಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ಸಿಎಸ್ ಗಣೇಶ್, ಸಮಿತಿಯ ವಕ್ತಾರ ದಯಾಸಾಗರ ಚೌಟ, ಮಾತನಾಡುತ್ತ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭ ಹಾಗೂ ಮುಂದಿನ ಯೋಜನೆ ಬಗ್ಗೆ ಸೂಕ್ತ ಮಾಹಿತಿಯಿತ್ತರು.
ಗೌರವ ಕಾರ್ಯದರ್ಶಿ ದೇವದಾಸ ಕುಲಾಲ್ ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ಸಿಎಸ್. ಗಣೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.
ಎಲ್ಲರನ್ನು ಸಂಘಟಿಸಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುದರೊಂದಿಗೆ ಅಭಿವೃದ್ದಿಗೊಳಿಸುವುದೇ ನಮ್ಮ ಮೂಲ ಉದ್ದೇಶ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ನಮ್ಮ ಸಮಿತಿಯಲ್ಲಿರುವವರೆಲ್ಲರೂ ಅವರವರ ಸಮಾಜದ ಸಂಘಟನೆಗಳಲ್ಲಿ ಉನ್ನತ ಪದವಿಯನ್ನು ಅಲಂಕರಿಸಿದವರು. ಮಾತ್ರವಲ್ಲದೇ ನಮ್ಮ ಸಮಿತಿಯ ಎಲ್ಲಾ ಸದಸ್ಯರು ಉನ್ನತ ಮಟ್ಟದ ವ್ಯಾಸಂಗ ಮಾಡಿ ಸುಪ್ರೀಂ ಕೋರ್ಟಿನ ವಕೀಲರಂತಹ ಉನ್ನತ ಮಟ್ಟದ ಹುದ್ದೆಯಲ್ಲಿದ್ದವರು. ಎಲ್ಲಾ ಸಮುದಾಯದವರಿಂದಾಗಿ ಸಮಿತಿಯು ಇಂದು ಗಟ್ಟಿಯಾಗಿದೆ. ಜಿಲ್ಲೆಗಳಲ್ಲಿ ಕೋಮುವಾದ ನಿರ್ಮೂಲನದ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ ನಮಗಿದೆ. ಜಿಲ್ಲೆಗಳ ಅಭಿವೃದ್ಧಿಗೆ ನಾವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲರಾಗಿದ್ದೇವೆ. ಸಮಿತಿಯು ಯಾವುದೇ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿದಲ್ಲಿ ಅದನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ. ಇನ್ನು ಮುಂದೆಯೂ ನಾವೆಲ್ಲರೂ ಒಂದಾಗಿ ಜಿಲ್ಲೆಗಳ ಅಭಿವೃದ್ದಿಗೆ ಶ್ರಮಿಸೋಣ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ನುಡಿದರು.
*******
ಪರಿಸರ ಪ್ರೇಮಿಯಲ್ಲಿರುವ ನಾವು ಪರಿಸರವನ್ನು ಪ್ತ್ರೀತಿಸುವವರು ಹಾಳು ಮಾಡುವವರಲ್ಲ. ಆದುದರಿಂದ ಇಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಹೊಂದಿದವರು ಇದ್ದಾರೆ. ಇಲ್ಲಿರುವವರೆಲ್ಲರೂ ಅವರವರ ಕ್ಷೆತ್ರದಲ್ಲಿ ಉನ್ನತ ಮಟ್ಟದಲ್ಲಿದ್ದು ಇದು ಬುದ್ಧಿವಂತರ ಸಂಘಟನೆ. ನಾನು ಈ ಸಮಿತಿಯೊಂದಿಗೆ ಸದಾ ಇರುವೆನು.
– ಪ್ರವೀಣ್ ಭೋಜ ಶೆಟ್ಟಿ, ಸಮಿತಿಯ ಸಲಹೆಗಾರರು
ಜಿಲ್ಲಾ ಸಮಿತಿಯಲ್ಲಿ ನಾನು ಅಧಿಕಾರ ವಹಿಸಿದ ನಂತರ ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆ, ನೇತ್ರಾವತಿ ನೀರು ಸೇರಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅದೆಲ್ಲವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆವುಯುತ್ತಿದೆ. ಇದಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಈಡೇರಿಸುವಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಮ್ಮ ಸಮಿತಿಯ ಮುನ್ನಡೆಯುತ್ತಿದೆ.
– ಹರೀಶ್ ಕುಮಾರ್ ಶೆಟ್ಟಿ, ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರು.
ನಮ್ಮ ಸಮಿತಿಗೆ ಬಹಳ ಪ್ರಾಮುಖ್ಯತೆ ಇದೆ. ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆಯಾದರೂ ಅದನ್ನು ನಮ್ಮ ಸಮಿತಿಯ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ನಡೆಯುತ್ತಿದ್ದು ಸಮಿತಿಯು ತನ್ನ ಕಾರ್ಯದಲ್ಲಿ ಜನಪ್ರಿಯವಾಗಿದೆ. ಸಮಿತಿಯ ಚಟುವಟಿಕೆಗಳ ಬಗ್ಗೆ ಸರಿಯಾದ ಸಮಯದಲ್ಲಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಗಮನಕ್ಕೆ ಬಾರದೆ ಇದ್ದಲ್ಲಿ ಸದಸ್ಯರಿಗೆ ಅನನುಕೂಲವಾಗಲು ಸಾಧ್ಯವಿದೆ. ಎಲ್ಲರನ್ನೂ ಸೇರಿಸಿ ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ ನಾವು ಮುಂದುವರಿಯೋಣ. ನಮ್ಮ ಸಮಿತಿಯಲ್ಲಿ ಅನುಭವೀ ಅಧ್ಯಕ್ಷರಿದ್ದು ನಮ್ಮ ಸಂಸ್ಥಾಪಕರು ತನ್ನ ವ್ಯಕ್ತಿತ್ವದಿಂದ ಎಲ್ಲರೊಂದಿಗೆ ಬೆರೆಯುವಂತಹ ಗುಣವನ್ನು ಹೊಂದಿದ್ದು ನಮ್ಮ ಸಮಿತಿಯ ಮುಂದಿನ ಪ್ರಗತಿಗೆ ಯಾವುದೇ ಮಾರಕವಿಲ್ಲ.
– ಧರ್ಮಪಾಲ ಯು. ದೇವಾಡಿಗ, ಸಮಿತಿಯ ಮಾಜಿ ಅಧ್ಯಕ್ಷರು.
ವರದಿ : ಈಶ್ವರ ಎಂ. ಐಲ್, ಚಿತ್ರ : ದಿನೇಶ್ ಕುಲಾಲ್