ತನಿಖಾ ನ್ಯೂನತೆ ಪ್ರಕರಣದ ಸ್ವರೂಪವನ್ನೇ ಬದಲಾಯಿಸಲಿದೆ- ಜಿಲ್ಲಾ ನ್ಯಾಯಧೀಶ ವೆಂಕಟೇಶ ನಾಯ್ಕ

Spread the love

ತನಿಖಾ ನ್ಯೂನತೆ ಪ್ರಕರಣದ ಸ್ವರೂಪವನ್ನೇ ಬದಲಾಯಿಸಲಿದೆ- ಜಿಲ್ಲಾ ನ್ಯಾಯಧೀಶ ವೆಂಕಟೇಶ ನಾಯ್ಕ

ಉಡುಪಿ: ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕಾನೂನಿನನ್ವಯ ಸೂಕ್ತ ರೀತಿಯ ತನಿಖೆ ಮಾಡದೆ ಇದ್ದರೆ, ಅ ತನಿಖೆಯಲ್ಲಿನ ನ್ಯೂನತೆ ಅಪರಾಧ ಪ್ರಕರಣದ ಸ್ವರೂಪವನ್ನೇ ಬದಲಿಸಿದ್ದು, ಗಂಭೀರ ಪ್ರಕರಣಗಳು ಸಾಮಾನ್ಯ ಪ್ರಕರಣದ ಸ್ವರೂಪ ಪಡೆಯಲಿದೆ ಆದ್ದರಿಂದ ಪೊಲೀಸರು , ಕಾನೂನು ಚೌಕಟ್ಟಿನಲ್ಲಿ ಸೂಕ್ತ ರೀತಿಯ ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ ಹೇಳಿದ್ದಾರೆ.

ಅವರು ಮಂಗಳವಾರ, ಉಡುಪಿ ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಪೊಲೀಸ್ ಇಲಾಖೆ ಹಾಗೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ, ಸಂತ್ರಸ್ತರ ಪರಿಹಾರ ಯೋಜನೆ ಹಾಗೂ ದಿನನಿತ್ಯದ ಕರ್ತವ್ಯದಲ್ಲಿ ಪೊಲೀಸರಿಗೆ ಎದುರಾಗುವ ಸಮಸ್ಯೆಗಳು ಎಂಬ ವಿಷಯಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬರುವ ಹಲವು ಅಪರಾಧ ಪ್ರಕರಣಗಳಲ್ಲಿ , ಸಾಕ್ಷ್ಯ ಸಂಗ್ರಹ, ಪಂಚನಾಮೆ , ದಾಖಲೆಗಳ ಸಂಗ್ರಹ ಮುಂತಾದ ಸಂದರ್ಭದಲ್ಲಿ ಪೊಲೀಸರು ಸಾಕಷ್ಟು ನ್ಯೂನತೆ ಎಸಗಿರುವುದು ಕಂಡು ಬರುತ್ತಿದೆ, ಅಪರಾಧ ಪ್ರಕರಣಗಳ ತನಿಖೆ ನಡೆಸುವ ತನಿಖಾಧಿಕಾರಿ , ಸೂಕ್ತ ಕಾನೂನು ಪ್ರಕ್ರಿಯಾ ಸಂಹಿತೆಗಳನ್ನು ಪಾಲಿಸುವುದು ಅಗತ್ಯ, ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ದೊರಕಿಸಬೇಕು ಇಲ್ಲವಾದಲ್ಲಿ ಅಪರಾಧಿಗಳು ಸುಲಭವಾಗಿ ಬಿಡುಗಡೆಯಾಗುತ್ತಾರೆ, ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಕಾನೂನು ಗೊಂದಲಗಳಿದ್ದಲ್ಲಿ , ಜಿಲ್ಲಾ ಸರ್ಕಾರಿ ಅಭಿಯೋಜಕರು ಹಾಗೂ ನ್ಯಾಯಧೀಶರ ಸಲಹೆ ಪಡೆಯುವಂತೆ ಜಿಲ್ಲಾ ನ್ಯಾಯಧೀಶರು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರ ಮೆಲೆ ನಡೆಯುವ ಪ್ರಕರಣಗಳ ವಿಚಾರಣೆ ಕುರಿತಂತೆ ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪರಸ್ಪರ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಗಳ ನಡುವೆ ಸಮನ್ವಯ ಅಗತ್ಯ , ಪೊಲೀಸರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಸಂದರ್ಭದಲ್ಲಿ ತಪ್ಪಿತಸ್ಥರೇ ಸುಳ್ಳು ದೂರು ದಾಖಲು ಮಾಡುತ್ತಿದ್ದು, ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ದೂರು ದಾಖಲಿಸಿಕೊಳ್ಳುವುದರಿಂದ ಕೆಲಸದ ಒತ್ತಡವೂ ಕಡಿಮೆಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ.ನಿಂಗರಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಎಸ್.ಪಂಡಿತ್ , ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಸ್ವಾಗತಿಸಿದರು.

ಅಪರಾಧ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಪಾತ್ರ , ಮಕ್ಕಳ ವಿರುದ್ದದ ಅಪರಾಧಿಕ ಪ್ರಕರಣಗಳು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ, ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ತನಿಖೆಯ ಕ್ರಮಗಳು , ಮಾನಸಿಕ ಒತ್ತಡ ನಿರ್ವಹಣೆ , ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.


Spread the love