ಮಂಗಳೂರು| ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪ: ಇಬ್ಬರ ಬಂಧನ
ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನಗರದ ಪಂಪ್ವೆಲ್ನ ತೌಸಿಫ್ ಅಹ್ಮದ್ (38) ಮತ್ತು ಕೆ.ಸಿ.ರೋಡ್ನ ಅಬ್ದುಲ್ ಖಾದರ್(41) ಬಂಧಿತ ಆರೋಪಿಗಳಾಗಿದ್ದಾರೆ.
ಕಂಕನಾಡಿ ನಗರ ಠಾಣೆಯ ಎಸ್ಸೈ ಶಿವಕುಮಾರ್ ಸಿಬ್ಬಂದಿಯ ಜೊತೆಗೂಡಿ ಸೋಮವಾರ ಅಪರಾಹ್ನ ರೌಂಡ್ಸ್ ಕರ್ತವ್ಯ ನಡೆಸುತ್ತಾ ಜೆಪ್ಪಿನಮೊಗರಿನಿಂದ ಕಲ್ಲಾಪು ಕಡೆಗೆ ಹೋಗುತ್ತಿದ್ದಾಗ ಕಡೆಕಾರ್ ಕ್ರಾಸ್ ಬಳಿ ನಿಂತಿದ್ದ ಇಬ್ಬರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಲೆತ್ನಿಸಿದರು ಎನ್ನಲಾಗಿದೆ.
ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಿಸ್ತೂಲ್ ಹಾಗೂ 6 ಸಜೀವ ಗುಂಡುಗಳನ್ನು ಹೊಂದಿರುವುದು ಕಂಡುಬಂದಿದೆ. ಈ ವೇಳೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.