ಮಂಗಳೂರು | ಯುವಕನ ಕೊಲೆಯತ್ನ : ಪ್ರಕರಣ ದಾಖಲು

Spread the love

ಮಂಗಳೂರು | ಯುವಕನ ಕೊಲೆಯತ್ನ : ಪ್ರಕರಣ ದಾಖಲು

ಮಂಗಳೂರು : ನಗರದ ಯೆಯ್ಯಾಡಿ ಸಮೀಪದ ಬಾರೊಂದರಲ್ಲಿ ವ್ಯಕ್ತಿಯೋರ್ವನನ್ನು ಕೊಲೆಗೆ ಯತ್ನಿಸಿರುವ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಶಿಕ್ ಚೂರಿ ಇರಿತಕ್ಕೊಳಗಾದವರು. ಬೃಜೇಶ್ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ʼಕೌಶಿಕ್ ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಬಾರ್‌ಗೆ ಹೋಗಿದ್ದು, ಈ ವೇಳೆ ತನ್ನನ್ನೂ ಊಟಕ್ಕೆ ಕರೆದಿದ್ದ. ಅದರಂತೆ ತಾನು ಅಲ್ಲಿಗೆ ಹೋದಾಗ ಮತ್ತೊಂದು ಟೇಬಲ್‌ನಲ್ಲಿ ಕುಳಿತ್ತಿದ್ದ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಎಂಬವರು ಕೌಶಿಕ್‌ಗೆ ಬಯ್ಯುತ್ತಿರುವುದು ಕೇಳಿಸಿತು. ಬಳಿಕ ಮೂವರೂ ಹೊಡೆಯಲು ಬಂದಾಗ ನಾನು ಅವರನ್ನು ಸಮಾಧಾನ ಪಡಿಸಿದೆ. ಮತ್ತೆ ಬೊಬ್ಬೆ ಜೋರಾಗುತ್ತಿದ್ದಂತೆ ಬಾರ್‌ನ ಕೆಲಸಗಾರರು ಎಲ್ಲರನ್ನು ಹೊರಗೆ ಕಳುಹಿಸಿದರು. ಆ ವೇಳೆ ಬೃಜೇಶ್ ತನ್ನಲ್ಲಿದ್ದ ಚೂರಿಯಿಂದ ಕೌಶಿಕ್‌ನ ಹೊಟ್ಟೆಯ ಬಲಭಾಗ, ಎದೆಯ ಎಡಭಾಗಕ್ಕೆ ಇರಿದು ಪರಾರಿಯಾಗಿದ್ದಾನೆʼ ಎಂದು ರಾಹುಲ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಸಂತು ಹಾಗೂ ಕೌಶಿಕ್‌ಗೆ ಯಾವುದೋ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಚಾರವಾಗಿ ಪರಿಚಯದವರೇ ಆದ ಆಟೊ ಚಾಲಕ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಜೊತೆ ಸೇರಿಕೊಂಡು ಕೌಶಿಕ್‌ನೊಂದಿಗೆ ತಗಾದೆ ತೆಗೆದು, ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಅದರ ಮುಂದುವರಿದ ಭಾಗವಾಗಿ ಬ್ರಿಜೇಶ್ ಇತರರ ಜೊತೆ ಸೇರಿಕೊಂಡು ಕೌಶಿಕ್‌ಗೆ ಚಾಕುವಿನಿಂದ ಇರಿದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಗಾಯಾಳು ಕೌಶಿಕ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments