ಮಣಿಪಾಲದಲ್ಲಿ ಗಾಂಜಾ ಮಾರಾಟ: ಇಬ್ಬರು ವಿದ್ಯಾರ್ಥಿಗಳ ಬಂಧನ
ಮಣಿಪಾಲ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ರಾಯಲ್ ಎಂಬೆಸಿ ಅಪಾರ್ಟ್ಮೆಂಟ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 18ರಂದು ರಾತ್ರಿ 11 ಗಂಟೆಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡವು, ರಾಯಲ್ ಎಂಬೆಸಿ ಅಪಾರ್ಟ್ಮೆಂಟ್ನ 17ನೇ ಮಹಡಿಯ ಫ್ಲಾಟ್ (C-1702) ಮೇಲೆ ದಾಳಿ ನಡೆಸಿ ಆರ್ಯನ್ ಸಿ. ತಾದಾನಿ ಎಂಬಾತನನ್ನು ಬಂಧಿಸಿದೆ. ಅವನಿಂದ 2.105 ಕೆಜಿ (₹60,000 ಮೌಲ್ಯದ) ಗಾಂಜಾ, ಹುಕ್ಕಾ, ಡಿಜಿಟಲ್ ಸ್ಕೇಲ್ ಹಾಗೂ ₹75,000 ಮೌಲ್ಯದ ಐಫೋನ್ ಸ್ವಾಧೀನಪಡಿಸಿಕೊಂಡಿದ್ದಾರೆ.
ಮುಂದಿನ ತನಿಖೆಯಲ್ಲಿ ಇನ್ನೋರ್ವ ಆರೋಪಿ ಆರ್ಯನ್ ಚಗಪ್ಪನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದ್ದು, ಅವನ ಸ್ಕೂಟಿ (KA 20 EX 7595)ಯಿಂದ 627 ಗ್ರಾಂ (₹20,000 ಮೌಲ್ಯದ) ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಇಬ್ಬರೂ ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ಬಿಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು. ಮಾದಕ ವ್ಯಸನಿಗಳಾಗಿರುವ ಇವರು ಗಾಂಜಾವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರೆಂಬುದು ತನಿಖೆಯಿಂದ ಬಹಿರಂಗವಾಗಿದೆ.
ಮಣಿಪಾಲ ಠಾಣೆಯಲ್ಲಿ NDPS ಕಾಯ್ದೆಯ ಕಲಂ 8(c), 20(b)(II)(b) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ಉಸ್ತುವಾರಿಯಲ್ಲಿ, ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಉಪನಿರೀಕ್ಷಕ ಅಕ್ಷಯಕುಮಾರಿ ಎಸ್.ಎನ್. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.