ಮುಕ್ಕ ಚರ್ಚ್ನಲ್ಲಿ ಪವಿತ್ರ ಗುರುವಾರ ಆಚರಣೆ; ಪ್ರೀತಿಯ ಆಜ್ಞೆ ಪಾಲಿಸಲು ಬಿಷಪ್ ಕರೆ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ದಾನ್ಹಾ ಅವರು ಮುಕ್ಕದ ಪವಿತ್ರಾತ್ಮರ ಚರ್ಚ್ನಲ್ಲಿ ಇಂದು ಸಂಜೆ 6 ಗಂಟೆಗೆ ಜರುಗಿದ ಪವಿತ್ರ ಗುರುವಾರ (Maundy Thursday) ಬಲಿಪೂಜೆಯ ನೇತೃತ್ವ ವಹಿಸಿದರು. ಈ ಮೂಲಕ ಪವಿತ್ರ ಸಪ್ತಾಹದ ಪ್ರಮುಖ ಮೂರು ದಿನಗಳ ಆಚರಣೆಗೆ ಚಾಲನೆ ನೀಡಲಾಯಿತು.

ಈ ಸಂಭ್ರಮದ ಬಲಿಪೂಜೆಯಲ್ಲಿ ಮುಕ್ಕ ಚರ್ಚ್ನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ಪಿಂಟೊ ಹಾಗೂ ವಂದನೀಯ ಪ್ರವೀಣ್ ಡಿಸೋಜ ಅವರು ಉಪಸ್ಥಿತರಿದ್ದು ಸಹ-ಬಲಿಪೂಜೆ ಅರ್ಪಿಸಿದರು.
ಬಿಷಪ್ ಪೀಟರ್ ಪಾಲ್ ಸಲ್ದಾನ್ಹಾ ಅವರು ತಮ್ಮ ಪ್ರವಚನದಲ್ಲಿ, “ಯೇಸು ದೇವರ ಪುತ್ರರಾಗಿದ್ದರೂ, ಆತನೇ ಸೇವಕನಾಗಿ ತನ್ನ ಶಿಷ್ಯರ ಕಾಲುಗಳನ್ನು ತೊಳೆದರು. ಈ ಘಟನೆಯು ಪ್ರೀತಿಯಲ್ಲಿ ನೆಲೆಯೂರಿದ ಸೇವಕ ನಾಯಕತ್ವವನ್ನು ತೋರಿಸುತ್ತದೆ. ಯೇಸು ನಮಗೆ ‘ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಎಲ್ಲರನ್ನೂ ಪ್ರೀತಿಸಬೇಕು’ ಎಂದು ಕರೆ ನೀಡುತ್ತಾನೆ. ಇದು ಆತನು ಈ ಲೋಕಕ್ಕೆ ನೀಡಿದ ಪ್ರೀತಿಯ ಆಜ್ಞೆಯಾಗಿದೆ,” ಎಂದು ತಿಳಿಸಿದರು. ನಾವು ಎಲ್ಲರೂ ನಮ್ಮ ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ಸ್ವಾರ್ಥರಹಿತ ಸೇವೆಯ ಮೂಲಕ ಈ ಪ್ರೀತಿಯ ಆಜ್ಞೆಯನ್ನು ಅನುಸರಿಸಲು ಕರೆಯಲ್ಪಟ್ಟಿದ್ದೇವೆ, ಇದರಿಂದ ಈ ಜಗತ್ತು ಪ್ರೀತಿ ಮತ್ತು ಶಾಂತಿಯ ಸ್ಥಳವಾಗುತ್ತದೆ ಎಂದು ಅವರು ಆಶಿಸಿದರು.

ಬಲಿಪೂಜೆಯ ಸಂದರ್ಭದಲ್ಲಿ ಬಿಷಪ್ ಅವರು 12 ಮಂದಿ ಪ್ರತಿನಿಧಿಗಳ ಪಾದಗಳನ್ನು ತೊಳೆದು ಕ್ರಿಸ್ತನ ಸೇವೆಯ ಮನೋಭಾವವನ್ನು ಸಾರಿದರು.
ಇದೇ ವೇಳೆ ಧರ್ಮಪ್ರಾಂತ್ಯದ 125 ಚರ್ಚ್ಗಳಲ್ಲಿ ಆಯಾ ಚರ್ಚ್ ಧರ್ಮಗುರುಗಳು ಈ ವಿಧಿಯನ್ನು ನೆರವೇರಿಸಿದರು. ಈ ವರ್ಷವನ್ನು ಮಂಗಳೂರು ಧರ್ಮಪ್ರಾಂತ್ಯದಲ್ಲಿ ‘ಮಕ್ಕಳ ವರ್ಷ’ ಎಂದು ಆಚರಿಸಲಾಗುತ್ತಿದ್ದು, ಇದರ ನೆನಪಿಗಾಗಿ ಅನೇಕ ಚರ್ಚ್ಗಳಲ್ಲಿ ಧರ್ಮಗುರುಗಳು ಮಕ್ಕಳ ಪಾದಗಳನ್ನು ತೊಳೆಯುವ ಮೂಲಕ ವಿಶೇಷ ಅರ್ಥವನ್ನು ನೀಡಿದರು. ಬಲಿಪೂಜೆಯ ನಂತರ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ ಆಲ್ತಾರಿನಲ್ಲಿ ಇರಿಸಿ, ಭಕ್ತಿಯಿಂದ ಆರಾಧನೆ ಸಲ್ಲಿಸಲಾಯಿತು.












