ಅಘೋಷಿತ ತುರ್ತು ಪರಿಸ್ಥಿತಿ ಮರೆಮಾಚಲು ಘೋಷಿತ ತುರ್ತು ಪರಿಸ್ಥಿತಿಯ ಅಪಪ್ರಚಾರ –ವಿಕಾಸ್ ಹೆಗ್ಡೆ
ಕುಂದಾಪುರ: ಅಘೋಷಿತ ತುರ್ತು ಪರಿಸ್ಥಿತಿ ಮರೆಮಾಚಲು ಘೋಷಿತ ತುರ್ತು ಪರಿಸ್ಥಿತಿಯ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಇಂದಿರಾ ಗಾಂಧಿ ಆಂತರಿಕವಾಗಿ ದೇಶಕ್ಕಾಗುತ್ತಿರುವ ಅಪಾಯ, ದೇಶದ ಶಾಂತಿ, ಸಹೋದರತೆ, ಸಹಬಾಳ್ವೆಗೆ ಎದುರಾದ ದೊಡ್ಡ ಆತಂಕಗಳನ್ನು ಅರಿತು ದೇಶದ ಐಕ್ಯತೆ ಮತ್ತು ಭದ್ರತೆಯನ್ನು ಕಾಪಾಡಲು ಘೋಷಿತ ತುರ್ತುಪರಿಸ್ಥಿತಿಯನ್ನು ದೇಶದಲ್ಲಿ ಜಾರಿ ಮಾಡಿದರು ಹಾಗೂ ಮುಂದೆ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿಯಾದಾಗ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ದೇಶದಲ್ಲಿ ಸಹೋದರತೆ, ಸಹಬಾಳ್ವೆಗೆ ಯಾವತ್ತೂ ಧಕ್ಕೆಯಾಗಬಾರದು, ಆತಂಕ ಎದುರಾಗಬಾರದು ಎನ್ನುವ ಉದ್ದೇಶದಿಂದ ಸಂವಿಧಾನದ ಪೀಠಿಕೆಯಲ್ಲಿ “ಜಾತ್ಯತೀತ ಮತ್ತು ಸಮಾಜವಾದಿ ” ಎಂದು ಘೋಷಣೆ ಮಾಡಿದರು.
ಆದರೆ ಇಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ದಿನದಿಂದ ಅಘೋಷಿತ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಲ್ಲಿದೆ. ಇದನ್ನು ಮರೆಮಾಚಲು ಬಿಜೆಪಿ ನಾಯಕರುಗಳು ತುರ್ತುಪರಿಸ್ಥಿತಿ ಜಾರಿಯಾಗಿ ಐವತ್ತು ವರ್ಷ ಕಳೆದ ಈ ಸಂದರ್ಭದಲ್ಲಿ ಪುನಃ ಅದನ್ನು ಜನರ ಮುಂದೆ ತಂದು ಸುಳ್ಳುಗಳನ್ನು ಹೇಳುವುದರ ಮೂಲಕ ವಿಶೇಷವಾಗಿ ಯುವ ಜನತೆಯನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.