ಆರು ತಿಂಗಳ ಬಳಿಕ ಭಕ್ತರ ಪ್ರವೇಶಕ್ಕೆ ಮುಕ್ತವಾದ ಉಡುಪಿ ಶ್ರೀ ಕೃಷ್ಣ ಮಠ

Spread the love

ಆರು ತಿಂಗಳ ಬಳಿಕ ಭಕ್ತರ ಪ್ರವೇಶಕ್ಕೆ ಮುಕ್ತವಾದ ಉಡುಪಿ ಶ್ರೀ ಕೃಷ್ಣ ಮಠ

ಉಡುಪಿ: ಕೊರೋನಾ ಮಹಾ ಮಾರಿ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಿಂದ ಸತತ ಆರು ತಿಂಗಳು ಮುಚ್ಚಿದ್ದ ಉಡುಪಿಯ ಶ್ರೀ ಕೃಷ್ಣ ಮಠ ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು ಮೊದಲ ದಿನ ಸುಮಾರು 500ಕ್ಕೂ ಅಧಿಕ ಭಕ್ತರು ದರ್ಶನ ಪಡೆದರು.

ಶ್ರೀಕೃಷ್ಣ ಮಠದಲ್ಲಿ, ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವದಕ್ಕಾಗಿ ಮಾಡಿದ ವಿಶೇಷ ದಾರಿಯನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರೊಂದಿಗೆ ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.

ಲಾಕ್ ಡೌನ್ ನಂತ್ರ ಕರಾವಳಿಯ ಬಹುತೇಕ ಎಲ್ಲ ದೇವಸ್ಥಾನಗಳಲ್ಲೂ ದೇವರ ದರ್ಶನ ಅವಕಾಶ ನೀಡಲಾಗಿದೆ. ಕಡಲತಡಿಗೆ ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ.. ಆದ್ರೆ ಉಡುಪಿ ಕೃಷ್ಣ ಭಕ್ತರಿಗೆ ಮಾತ್ರ ಮಠದ ಒಳಗೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಮಾಹಿತಿ ಇಲ್ಲದೇ ಆಗಮಿಸಿ ಭಕ್ತರು ಹೊರಗಿನಿಂದಲೇ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರು. ಆದ್ರೆ ಈಗ ಆರು ತಿಂಗಳ ಬಳಿಕ ಕೃಷ್ಣಮಠದ ಆಡಳಿತ ಸಮಿತಿ ದೇವಾಲಯವನ್ನು ಭಕ್ತರಿಗೆ ತೆರೆಯುವ ನಿರ್ಧಾರ ಮಾಡಿದ್ದು ಸೋಮವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಲಾಕ್ ಡೌನ್ ನ ಆರು ತಿಂಗಳ ಕಾಲ, ಪರ್ಯಾಯ ಈಶಪ್ರೀಯ ತೀರ್ಥರು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕೃಷ್ಣ ಮಠದ ಭೋಜನ ಶಾಲೆ, ಬಡಗು ಮಳಿಗೆ ಪಾರಂಪರಿಕ ನೈಸರ್ಗಿಕ ಬಣ್ಣವನ್ನು ಬಳಿಯಲಾಗಿದೆ. ದರ್ಶನಕ್ಕೆ ತೆರಳುವ ಮಾರ್ಗವನ್ನು ಬದಲಾಯಿಸಲಾಗಿದ್ದು, ರಾಜಾಂಗಣ ಪ್ರವೇಶ ಮಾಡಿ ಅಲ್ಲಿಂದ ಭೋಜನ ಶಾಲೆಯ ಮೇಲೆರಿ ಅಲ್ಲಿ ಕೃಷ್ಣ ಮಠದ ಒಳ ಪ್ರವೇಶ ಮಾಡುಲ ವ್ಯವಸ್ಥೆ ಮಾಡಿದ್ದಾರೆ. ಹೊಸ ಮಾರ್ಗದಲ್ಲಿ ಹೋಗ್ತಾ ಇದ್ರೆ ಪ್ರಾಚೀನ ಪರಂಪರೆಗೆ ಮರಳಿದ ಅನುಭವವಾಗುತ್ತದೆ ಗಾಳಿ ಬೆಳಕು ಇರುವ ಮಾರ್ಗವಾಗಿ ಸಾಗಿದರೆ ಮೇಲ್ಭಾಗದಲ್ಲಿ ಹೊದಿಸಿದ ಸ್ವರ್ಣ ಗೋಪುರವನ್ನು ವೀಕ್ಷಿಸುವ ಅವಕಾಶ ಭಕ್ತರಿಗೆ ಸಿಗಲಿದೆ.

ದೇವಸ್ಥಾನಕ್ಕೆ ಭಕ್ತರು ಸಾಮಾಜಿಕ ಅಂತರ ಪಾಲಿಸುವ ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಬಳಸಬೇಕಾಗಿದೆ. ಇದರ ಜೊತೆಗೆ ತಮ್ಮ ಗುರುತಿನ ಚೀಟಿಯ ಜೊತೆ ನೋಂದಣಿ ಮಾಡಿಸಿಕೊಳ್ಳಬೇಕು, ಮಠದಲ್ಲಿ ಜನಜಂಗುಳಿ ನಿಯಂತ್ರಿಸಲು ಕ್ಯೂ ವ್ಯವಸ್ಥೆ ಸಂಪೂರ್ಣ ಬದಲಾಯಿಸಲಾಗಿದ್ದು, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಪ್ರತ್ಯೇಕ ಪ್ರವೇಶದ್ವಾರವನ್ನು ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಭಕ್ತರು ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆದುಕೊಳ್ಳುವಂತೆ ಮಠದ ಆಡಳಿತ ಮಂಡಳಿ ತಿಳಿಸಿದೆ.

ಕೃಷ್ಣ ಮಠದಲ್ಲಿ ಭೋಜನ ವ್ಯವಸ್ಥೆಯನ್ನು ಸದ್ಯ ಆರಂಭಿಸುವ ಯಾವುದೇ ಮುನ್ಸೂಚನೆಗಳಿಲ್ಲ. ಉಳಿದ ಎಲ್ಲಾ ಕಡೆಗಳಲ್ಲಿ ದೇವರ ದರ್ಶನವನ್ನು ಮಹಾದ್ವಾರದ ಮೂಲಕ ಭಕ್ತರು ಪಡೆದರೆ, ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯ ಮೂಲಕ ನೋಡಬೇಕಾಗುತ್ತದೆ. ಹೀಗೆ ದರ್ಶನ ಮಾಡುವಾಗ ನವಗ್ರಹ ಕಿಂಡಿಗೆ ಸಾವಿರಾರು ಜನರ ಮುಖ ಉಸಿರು ತಾಗುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅದಕ್ಕೆ ಮುಂಜಾಗೃತಾ ಕ್ರಮವಾಗಿ ಶ್ರೀಕೃಷ್ಣನನ್ನು ತೀರ್ಥ ಮಂಟಪದ ಸಮೀಪದಲ್ಲೇ ನೋಡುವಂತೆ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ.

ಸೆಪ್ಟೆಂಬರ್ 28ರಿಂದ ಭಕ್ತಾದಿಗಳಿಗೆ ನಿಗದಿತ ಸಮಯದಲ್ಲಿ(ಮಧ್ಯಾಹ್ನ 2 ಘಂಟೆಯಿಂದ 5 ರ ತನಕ) ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.


Spread the love