ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಪ್ರಕರಣಗಳಲ್ಲಿ ಕಮಿಷನರೇಟ್ನ ಕಠಿಣ ಕ್ರಮ: ಸ್ಯೂರಿಟಿ ಆಸ್ತಿಗಳ ಮುಟ್ಟುಗೋಲು
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ನಂತರ, ಕೆಲವು ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ, ನ್ಯಾಯಾಲಯದಿಂದ ಆರೋಪಿಗಳನ್ನು ಬಿಡುಗಡೆ ಮಾಡುವ ಸಂದರ್ಭ ಸ್ಯೂರಿಟಿದಾರರು ಭದ್ರತೆಯ ಆಧಾರವಾಗಿ ನೀಡಿದ ಜಮೀನು ಮತ್ತು ಸೊತ್ತುಗಳ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸ್ಯೂರಿಟಿದಾರರ ಹೆಸರಿನ ಆಸ್ತಿಗಳನ್ನು ಮುತ್ತುಗೋಲು (seizure) ಮಾಡುವ ಹಾಗೂ ಅವರು ನೀಡಿದ್ದ ದಂಡ ಮೊತ್ತವನ್ನು ವಸೂಲಿ ಮಾಡುವ ಕ್ರಮಗಳು ಕೈಗೊಳ್ಳಲಾಗಿದೆ.
ಮುಟ್ಟುಗೋಲು ಮಾಡಲಾದ ಆಸ್ತಿಗಳ ವಿವರಗಳನ್ನು ಸಂಬಂಧಪಟ್ಟ ಆರ್ಟಿಸಿ ದಾಖಲೆಗಳಲ್ಲಿ ದಾಖಲಿಸಲಾಗಿದ್ದು, ಕೆಲ ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆ ಪ್ರಸ್ತುತ ಮುಂದುವರಿಯುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಐದು ಅಪರಾಧ ಪ್ರಕರಣಗಳಲ್ಲಿ ಸ್ಯೂರಿಟಿಗಾಗಿ ಇರಿಸಲಾಗಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದ್ದು,
ಎರಡು ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ಇನ್ನೂ ನಾಲ್ಕು ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆ ನಡೆಯುತ್ತಿದೆ.
ಈ ಕಾರ್ಯಾಚರಣೆ ಆರಂಭವಾದ ನಂತರ, ಎರಡು ಪ್ರಕರಣಗಳಲ್ಲಿ ಆರೋಪಿಗಳು ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ನ ಪ್ರಕಟಣೆಯಲ್ಲಿ ತಿಳಿಸಿದಂತೆ, ಈ ರೀತಿಯ ಕ್ರಮಗಳು ಮುಂದುವರಿಯಲಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ —
“ಆರೋಪಿಗಳ ಪರವಾಗಿ ಜಾಮೀನು ಕೊಡುವ ಮೊದಲು ಅವರ ಪೂರ್ವಾಪರ ಮತ್ತು ಕಾನೂನು ಹಿನ್ನೆಲೆಯನ್ನು ಪರಿಶೀಲಿಸಿ, ಎಚ್ಚರ ವಹಿಸಬೇಕು” ಎಂದು ತಿಳಿಸಲಾಗಿದೆ.