ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ

Spread the love

ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ 10 ದಿನ ನಡೆಯುವ ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಹಿರಿಯ ಶಿಲ್ಪ ಕಲಾವಿದ ರಾಮಮೂರ್ತಿ ಎಂ. ಶಿಬಿರಕ್ಕೆ ಚಾಲನೆ ನೀಡಿ, ಶಿಲ್ಪ ಕಲೆ ಕ್ಷೇತ್ರವು ವಿಸ್ತಾರಗೊಳ್ಳುತ್ತಿದ್ದು, ಶಿಲ್ಪಕಲೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಶಿಲ್ಪಕಲೆಯನ್ನು ಕಲಿಯುವ ಆಸಕ್ತರ ಸಂಖ್ಯೆಯೂ ಏರಿಕೆಯಾಗಿದೆ. ಶಿಲ್ಪ ಕಲಾ ಅಕಾಡೆಮಿ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಶಿಲ್ಪ ಕಲೆಯ ಸಕಾರತ್ಮಕ ಬೆಳವಣಿಗೆಗೆ ಕಾರಣವಾಗಿದೆ. ಆಳ್ವಾಸ್ ಶಿಲ್ಪ ವಿರಾಸತ್‍ನಂತಹ ಶಿಬಿರಗಳು ಕಲೆಯ ಉನ್ನತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಪ್ರಯತ್ನಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ನಾತಕೋತ್ತರ ವಿಶ್ಯುಯಲ್ ಆಟ್ರ್ಸ್ ಅನ್ನು ಸಂಸ್ಥೆಯಲ್ಲಿ ಪ್ರಾರಂಭಿಸುತ್ತಿದ್ದೇವೆ. ಹಿರಿಯ ಕಲಾವಿದರ ಕಲಾಕೃತಿಗಳಿಂದ ಸ್ಪೂರ್ತಿಗೊಂಡ ಕಲಾ ವಿದ್ಯಾರ್ಥಿಗಳು ಉತ್ತಮ ಕಲಾಕೃತಿಗಳನ್ನು ರಚಿಸುವಂತಾಗಬೇಕು. ಆಳ್ವಾಸ್ ಸಂಸ್ಥೆಯ ಕಲಾ ವಿದ್ಯಾರ್ಥಿಗಳ ಕಲಾಕೃತಿ ಪ್ರದರ್ಶವನ್ನು ಆಯೋಜಿಸಿದಲ್ಲಿ ಅದಕ್ಕೆ ಪೂರಕವಾದ ವ್ಯವಸ್ಥೆ ಸಂಸ್ಥೆ ಮಾಡಿಕೊಡಲಿದೆ ಎಂದು ಹೇಳಿದರು.

ಶಿಬಿರ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಶಿಬಿರದ ಶಿಲ್ಪಕಲಾವಿದರಾದ ಶಿವಕುಮಾರ್ ಜಿ.ವಿ(ಬೆಂಗಳೂರು), ಮಂಜುನಾಥ ಆಚಾರ್ಯ(ಚಿತ್ರದುರ್ಗ), ಸಿದ್ದರೂಡ(ಬಳ್ಳಾರಿ), ಶಿಲ್ಪಿ ಚಿದಾನಂದ(ವಿಟ್ಲ, ದ.ಕ), ಶಶಿಕುಮಾರ್ ಉಜಿರೆ(ದ.ಕ), ಕೃಷ್ಣ ಗುಡಿಗಾರ್(ಕುಂದಾಪುರ), ಕುಮಾರ್(ಕುಂದಾಪುರ), ಯತೀಶ್(ಕುಂದಾಪುರ), ಛತೀಸ್‍ಗಡ ಕಲಾವಿದರಾದ ಬಂಶಿಲಾಲ್ ಬೈದ್, ರವಿಂದ್ ನಾಗ್, ಅಮೀರ್ ನಾಗ್, ಅಕಾಶ್ ನಾಗ್ ಅವರನ್ನು ಸ್ವಾಗತಿಸಲಾಯಿತು.


Spread the love