ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸ – ಬಿಷಪ್ ಜೆರಾಲ್ಡ್ ಲೋಬೊ

Spread the love

ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಕೇವಲ ತಮ್ಮ ಸ್ವಾರ್ಥವನ್ನು ಕಾಣದೆ ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಉಡುಪಿಯ ಸೈಂಟ್ ಸಿಸಿಲಿಸ್ ಶಾಲಾ ಮೈದಾನಲ್ಲಿ ಆಯೋಜಿಸಿದ್ದ ಪ್ರಖ್ಯಾತ ಕೊಂಕಣಿ ಗಾಯಕರಾದ ಮೆಲ್ವಿನ್ ಪೆರಿಸ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿ ಮಾತನಾಡಿದರು.

ಕೆಥೊಲಿಕ್ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಜಗತ್ತಿನ ಕ್ರೈಸ್ತ ಸಮುದಾಯಕ್ಕೆ ನೀಡಿದ ಆದೇಶದಂತೆ ಉಡುಪಿ ವಲಯ ಯಾವುದೇ ಜಾತಿ ಮತ ಭೇಧವಲ್ಲಿದೆ ಇತರರ ನೋವಿಗೆ ಸ್ಪಂದಿಸುವಲ್ಲಿ ಮಾದರಿಯಾಗಿದೆ. ಈ ಮೂಲಕ ಮುಂದೆಯೂ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸವನ್ನು ಮುಂದುವರೆಸೋಣ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ, ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ವಸತಿಯ ಆಗತ್ಯ ಹೊಂದಿರುವರಿಗೆ, ಉನ್ನತ ವಿದ್ಯಾಭ್ಯಾಸ ಮುಂದವರಿಸಲು ಅಪೇಕ್ಷಿಸುವವರಿಗೆ, ಮತ್ತು ಸ್ವ-ಉದ್ಯೋಗ ಮಾಡಲು ಇಚ್ಛಿಸುವ ಕ್ರೈಸ್ತ, ಹಿಂದೂ, ಮುಸ್ಲಿಂ ಕುಟುಂಬದ 20 ಅರ್ಹ ಫಲಾನುಭವಿಗಳಿಗೆ ರೂ 6 ಲಕ್ಷ 20 ಸಾವಿರ ಮೊತ್ತವನ್ನು ಹಸ್ತಾಂತರಿಸಲಾಯಿತು.

ಇದೇ ವೇಳೆ ಉಡುಪಿ ವಲಯದ ಕ್ರೈಸ್ತ ಉದ್ಯಮಿಗಳ ಟೆಲಿಫೋನ್ ಡೈರಕ್ಟರಿಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ ಅನಾವರಣಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಸಂತ ಸಿಸಿಲಿ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ವಿಭಾ, ಉಡುಪಿ ವಲಯದ ಮಾರ್ಗದರ್ಶಕರಾದ ಅಲ್ಫೋನ್ಸ್ ಡಿಕೋಸ್ತಾ, ಘಟಕಗಳ ಅಧ್ಯಕ್ಷರುಗಳಾದ ಬ್ರಾಯನ್ ಕೊರೆಯಾ, ಸಂಜಯ್ ಅಂದ್ರಾದೆ, ಲೋರೆನ್ಸ್ ಡೆಸಾ, ರಫಾಯೆಲ್ ಡಿಸೋಜಾ, ವಲೇರಿಯನ್ ಮಥಾಯ್ಸ್, ಅನಿಲ್ ಡಿಸೋಜಾ, ಬ್ರಿಜಿತ್ ಡಿಸಿಲ್ವಾ ಹಾಗೂ ಇತರರು ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಉಡುಪಿ ವಲಯ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿ ಕಾರ್ಯದರ್ಶಿ ಲವೀನಾ ಪಿರೇರಾ ವಂದಿಸಿದರು. ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಖ್ಯಾತ ಕೊಂಕಣಿ ಗಾಯಕರಾದ ಮೆಲ್ವಿನ್ ಪೆರಿಸ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.


Spread the love