ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ

Spread the love

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ

 
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು.
 
ಬೆಳಗ್ಗೆ ಮಲ್ಪೆಯ ಮನೆಗೆ ತೆರಳಿ ತಾಯಿ ಮನೋರಮಾ ಮಧ್ವರಾಜ್ ಅವರ ಆಶೀರ್ವಾದ ಪಡೆದುಕೊಂಡ ಪ್ರಮೋದ್ ಬಳಿಕ, ನೀಲಾವರ ಮಹಿಷ ಮರ್ದಿನಿ ದೇವಸ್ಥಾನ ಹಾಗೂ ನಾಗಸ್ಥಾನ, ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ, ರಥಬೀದಿ ಶ್ರೀಅನಂತೇಶ್ವರ, ಶ್ರೀ ಚಂದ್ರಮೌಳಿಶ್ವೇರ ದೇವಸ್ಥಾನ, ಉಡುಪಿ ಶೋಕಮಾತಾ ಇಗರ್ಜಿ, ದೊಡ್ಡಣಗುಡ್ಡೆ ಮಸೀದಿ, ಕೊನೆಯದಾಗಿ ಬನ್ನಂಜೆ ಯಲ್ಲಿ ಶ್ರೀನಾರಾಯಣಗುರು ಮಂದಿರಕ್ಕೆ ತೆಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
 
ಅಲ್ಲಿಂದ ನೇರವಾಗಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಪ್ರಮೋದ್, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾಗೂ ಕಾರ್ಯ ಕರ್ತರೊಂದಿಗೆ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಿ.ಜಾರ್ಜ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎಂ.ಎ.ಗಫೂರ್, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್ ಹಾಜರಿದ್ದರು.
 
ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಾರ್ಯಕರ್ತರ, ಮುಖಂಡರ ಆಶೀರ್ವಾದ ಪಡೆದು ನಾಮ ಪತ್ರ ಸಲ್ಲಿಸಿದ್ದೇನೆ. ಈ ಹಿಂದೆ ಶಾಸಕ, ಮಂತ್ರಿಯಾಗಿದ್ದ ನನಗೆ ಕೆಲಸ ಮಾಡುವುದು ಹೇಗೆ ಎಂಬುದು ಗೊತ್ತಿದೆ. ಕೆಲಸ ಮಾಡುವವರು ಈ ಬಾರಿ ಈ ಕ್ಷೇತ್ರದ ಸಂಸದರಾಗಬೇಕೆಂಬುದು ಜನರ ಬಯಕೆಯಾಗಿದೆ. ಜನರ ಬಯಕೆಗೆ ತಕ್ಕಂತೆ ನನ್ನನು ಜನ ಆರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

Spread the love