ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾರಿಂದ ಕಾಂಗ್ರೆಸ್ ಮುಕ್ತ ಅಸಾಧ್ಯ – ಡಾ|ಜಯಮಾಲಾ

Spread the love

ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾರಿಂದ ಕಾಂಗ್ರೆಸ್ ಮುಕ್ತ ಅಸಾಧ್ಯ – ಡಾ|ಜಯಮಾಲಾ

 
ಉಡುಪಿ: ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಮುಕ್ತ ಕ್ಷೇತ್ರವನ್ನಾಗಿಸುವುದು ಅವರ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಹೇಳೀದ್ದಾರೆ.
 
ಸೋಮವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
 
ಕಾಂಗ್ರೆಸ್ ಚಿಹ್ನೆ ಇಲ್ಲದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತವಾಗಿದೆ ಎನ್ನುವ ಶೋಭಾ ಕಳೆದ 5 ವರ್ಷದ ಹಿಂದೆ ಕಮಲ ಚಿಹ್ನೆಯಡಿ ಗೆದ್ದು ಇಷ್ಟು ದಿನ ಎಲ್ಲಿ ಹೋಗಿದ್ದರು. ಅವರ ಮನೆಯಲ್ಲೇ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭವಾಗಿರುವಾಗ ಕಾಂಗ್ರೆಸ್ ಮುಕ್ತ ಮಾತು ನಿಮ್ಮ ಜನ್ಮದಲ್ಲಿ ಸಾಧ್ಯವಿಲ್ಲ. ಗೋ ಬ್ಯಾಕ್ ಶೋಭಾ ಹೇಳಿದ್ದು ನಿಮ್ಮ ಮನೆಯವರೇ. ಇನ್ನೊಬ್ಬರಿಗೆ ಬೆರಳು ತೋರಿಸುವ ಮೊದಲು ನಿಮ್ಮ ಸಾಧನೆ ಏನು ಎಂಬುದನ್ನು ಹೇಳಿ. ಕಳೆದ 5 ವರ್ಷ ಎಲ್ಲೋ ಇದ್ದುಕೊಂಡು ಈಗ ಓಡಿ ಬರುವುದು ಯಾವ ನ್ಯಾಯ? ಕ್ಷೇತ್ರದ ಜನ ಅಷ್ಟು ಮೂರ್ಖರೇ? ದಿನದ 24 ಗಂಟೆಯೂ ಮೋದಿ ಮೋದಿ ಎನ್ನುವುದು ಬಿಡಿ. ನೀವು ಕ್ಷೇತ್ರಕ್ಕೆ ಕೊಟ್ಟಿರುವ ಅಭಿವೃದ್ಧಿಯ ಪಟ್ಟಿ ಕೊಡಿಸಿ. ಮೋದಿ ನಮಗೂ ಪ್ರಧಾನಿ. ಪ್ರತಿ ವಿಚಾರಕ್ಕೂ ಒಬ್ಬರನ್ನೇ ಬೊಟ್ಟು ಮಾಡಬೇಡಿ ಎಂದು ಸಲಹೆ ನೀಡಿದರು.
 
ಶೋಭಾ ಅವರಿಗೆ ಸೋಲಿನ ಚಿಂತೆ ಶುರುವಾಗಿದೆ. ಗೆಲ್ಲುವ ವಿಶ್ವಾಸವಿದ್ದರೆ ಜನರ ಬಳಿ ಹೋಗಿ ಒಂದು ಅವಕಾಶ ಕೊಡುವಂತೆ ಕೇಳುತ್ತಿದ್ದರು. ಅದು ಬಿಟ್ಟು ಇಲ್ಲ ಸಲ್ಲದ ಆರೋಪ, ಇನ್ನೊಂದು ಪಕ್ಷದ ಟೀಕೆ ಮಾಡುತ್ತಿರಲಿಲ್ಲ ಎಂದು ಟೀಕಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ 5 ವರ್ಷದಲ್ಲಿ ಶೂನ್ಯ ಕೊಡುಗೆ ನೀಡಿದ್ದು, ತಮ್ಮಲ್ಲಿ ಸತ್ವವಿಲ್ಲದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆ. ಮೋದಿ ನಮಗೂ ಪ್ರಧಾನಿ. ಅವರನ್ನು ಬಿಟ್ಟು ಚುನಾವಣೆಗೆ ಬನ್ನಿ ಎಂದರು.
 
ಪ್ರಮೋದ್ ಓರ್ವ ಸಮರ್ಥ ನಾಯಕ. ಲೋಕಲ್ ಲೀಡರ್. ಕಾಂಗ್ರೆಸ್- ಜೆಡಿಎಸ್ನ ಒಮ್ಮತ ಅಭ್ಯರ್ಥಿ. ನಮ್ಮಲ್ಲಿ ಗೊಂದಲವಿಲ್ಲ. ಖಂಡಿತವಾಗಿ ಪ್ರಮೋದ್ ಗೆಲ್ಲುವ ನಂಬಿಕೆ ಇದೆ. ಬಾಯಲ್ಲಿ ಹೇಳುವುದು ಅಭಿವೃದ್ಧಿಯಲ್ಲ ಎನ್ನುವುದು ಜನರಿಗೂ ಅರ್ಥವಾಗಿದೆ. ಸರಳ, ಸಜ್ಜನಿಕೆ ವ್ಯಕ್ತಿ ಪ್ರಮೋದ್ ಗೆಲುವಿಗೆ ಈ ಬಾರಿ ಹಾರೈಸಿ ಎಂದರು.

Spread the love