ಕಾನೂನು ಏನೇ ಇರಲಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ಸರಕಾರ ನೋಡಿಕೊಳ್ಳಬೇಕು: ವೇದವ್ಯಾಸ್ ಕಾಮತ್

Spread the love

ಕಾನೂನು ಏನೇ ಇರಲಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ಸರಕಾರ ನೋಡಿಕೊಳ್ಳಬೇಕು: ವೇದವ್ಯಾಸ್ ಕಾಮತ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ಹೆಸರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಳ್ಳಿ ಇಟ್ಟು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ ಎಂದು ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಸಿದ್ದಿ. ಅಂತಹ ಸ್ಥಳದಲ್ಲಿ ಹಬ್ಬದ ಸಂಭ್ರಮ ತುಸು ಹೆಚ್ಚೇ ಇರುವುದು ಸಾಮಾನ್ಯವಾಗಿದ್ದು, ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶ ಹೀಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಶ್ರೀ ಕೃಷ್ಣ ಜನ್ಮಾಷ್ಟಮಿಯು ಈ ಭಾಗದಲ್ಲಿ ಸಂಭ್ರಮದ ಹಬ್ಬವಾಗಿದ್ದು ಪೊಲೀಸರು ಸಂಜೆ ಆರು ಗಂಟೆಗೆ ಬಂದು ಸೌಂಡ್ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಕೃಷ್ಣವೇಷ ಸ್ಪರ್ಧೆ, ಭರತನಾಟ್ಯ, ರಸಮಂಜರಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡು ಹಬ್ಬದ ಸಂಭ್ರಮದಲ್ಲಿದ್ದವರಿಗೆ ಇದೇ ಮೊದಲ ಬಾರಿಗೆ ನಿರಾಸೆಯಾಗಿದೆ. ಅಲ್ಲದೇ ಕಾರ್ಯಕ್ರಮ ಆಯೋಜಕರ ಮೇಲೆ, ಸೌಂಡ್ ಸಿಸ್ಟಮ್ ಮಾಲಕರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.

ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲೂ ಇಂತಹ ನಿಯಮ ಆದೇಶಗಳಿದ್ದರೂ ಹಬ್ಬದ ಸಂಭ್ರಮಕ್ಕೆ ಕಿಂಚಿತ್ತೂ ಅಡ್ಡಿಪಡಿಸಿಲ್ಲ. ರಾತ್ರಿ ಹತ್ತೂವರೆ ನಂತರ ಯಾವುದೇ ಕಾರ್ಯಕ್ರಮ ನಡೆಯಬಾರದು, ಮೊಸರು ಕುಡಿಕೆಗೆ ಕಟ್ಟಿರುವ ಮಡಿಕೆಗಳನ್ನು ನಾಳೆ ಬಂದು ಒಡೆಯಿರಿ ಎಂದು ಪೊಲೀಸರು ಹೇಳುವುದು ಎಷ್ಟು ಸರಿ? ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚೌತಿ, ನವರಾತ್ರಿ, ಹುಲಿವೇಷ, ಹೀಗೆ ಇಡೀ ದಕ್ಷಿಣಕನ್ನಡ ಜಿಲ್ಲೆ ಹಬ್ಬದ ಸಂಭ್ರಮದಲ್ಲಿ ಮುಳುಗಲಿದ್ದು ಯಾವುದೇ ಗೊಂದಲ ಉಂಟಾಗದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಜನ ರೊಚ್ಚಿಗೆದ್ದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.


Spread the love
Subscribe
Notify of

0 Comments
Inline Feedbacks
View all comments