ಕಾವ್ಯಾ ಸಾವು ಪ್ರಕರಣ; ದೈಹಿಕ ಶಿಕ್ಷಕನ ಮಂಪರು ಪರೀಕ್ಷೆಗೆ ಜಯಕರ್ನಾಟಕ ಒತ್ತಾಯ

Spread the love

ಕಾವ್ಯಾ ಸಾವು ಪ್ರಕರಣ; ದೈಹಿಕ ಶಿಕ್ಷಕನ ಮಂಪರು ಪರೀಕ್ಷೆಗೆ ಜಯಕರ್ನಾಟಕ ಒತ್ತಾಯ

ಉಡುಪಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಅನುಮಾಸ್ಪದ ಸಾವಿನ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳುವಲ್ಲಿ ಇಲಾಖೆ ವಿಳಂಬ ಧೋರಣೆಯನ್ನು ತೋರಿಸುತ್ತಿದ್ದು ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಜಯಕರ್ನಾಟಕ ಉಡುಪಿ ಜಿಲ್ಲಾ ಸಂಘಟನೆ ಅಗೋಸ್ತ್ 14 ರಂದು ಸೋಮವಾರ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಕೆ. ರಮೇಶ್ ಶೆಟ್ಟಿ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾವ್ಯಾಳ ಸಾವಿನ ಕುರಿತು ಆಕೆಯ ಹೆತ್ತವರು ದೈಹಿಕ ಶಿಕ್ಷಕನ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಆತನ ಮಂಪರು ಪರೀಕ್ಷೆ ನಡೆಸಿದ್ದಲ್ಲಿ ನಿಜಾಂಶ ಹೊರಬರಲು ಸಾಧ್ಯವಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಆದರೆ ಶಿಕ್ಷಣ ಸಂಸ್ಥೆ ಹಾಗೂ ಪೋಲಿಸ್ ಇಲಾಖೆ ಇದರ ಕುರಿತು ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದು, ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ತನಿಖೆ ವಿಳಂಬವಾದಲ್ಲಿ ವಿವಿಧ ರೀತಿಯ ಪ್ರಭಾವದಿಂದ ಸಾವಿನ ನಿಜಾಂಶ ಮರೆಯಾಗುವ ಸಾಧ್ಯತೆ ಉಂಟಾಗಬಹುದು ಎಂಬ ಕಾರಣದಿಂದ ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ 10.30ಕ್ಕೆ ಜೋಡು ಕಟ್ಟೆಯಿಂದ ಕ್ಲಾಕ್ ಟವರ್ ತನಕ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆ ನಡೆಸಲಾಗುವುದು ನಂತರ ಅಲ್ಲಿಂದ ರಜತಾದ್ರಿಗೆ ವಾಹನ ಮೂಲಕ ಸಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಆಶ್ರಯದಾತ ಆಟೋರಿಕ್ಷಾ ಸಂಘಟನೆ, ಮಹಿಳಾ ಘಟಕಗಳು ಭಾಗವಹಿಸಲಿವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕರುಣಾಕರ ಪೂಜಾರಿ, ನಿತ್ಯಾನಂದ ಅಮೀನ್, ಬಿ ಸುಧಾಕರ ರಾವ್, ಎಸ್ ಎಸ್ ತೋನ್ಸೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love