ಕುಂದಾಪುರ ; ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಬಂಧನ

Spread the love

ಕುಂದಾಪುರ ; ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಬಂಧನ

ಕುಂದಾಪುರ: ಕುಂದಾಪುರದ ಕಾವ್ರಾಡಿ ಮುಳ್ಳುಗುಡ್ಡೆ, ಬಸ್ರೂರು ಮತ್ತು ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹಗಳಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹೊನ್ನಾವರ ತಾಲೂ ಮಂಕಿ ನಿವಾಸಿ ವಿಲ್ಸನ್ ಪಿಯಾದಾಸ್ ಲೋಪಿಸ್ (29) ಮತ್ತು ತೆಕ್ಕಟ್ಟೆ ನಿವಾಸಿ ಗಂಗಾಧರ ಎಂದು ಗುರುತಿಸಲಾಗಿದೆ.

ಆರೋಪಿಗಳು 2019 ಮೇ ತಿಂಗಳಿನಲ್ಲಿ ಕುಂದಾಪುರ ತಾಲೂಕು , ಕಾವಾಡಿ ಗ್ರಾಮದ ಮುಳ್ಳು ಗುಡ್ಡೆ ಯಲ್ಲಿರುವ ನಾಗರಾಜ್ ಅವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಮಾಡಿನ ಹಂಚನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಕಪಾಟನ್ನು ಒಡೆದು ಮನೆಯೊಳಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣ, ಇಸ್ತ್ರಿಪೆಟ್ಟಿಗೆ ನಗದು ಸೇರಿ ಒಟ್ಟು 64.900/- ಮೌಲ್ಯದ ಸೊತ್ತು ಗಳು ಕಳವು ಮಾಡಿದ್ದರು. ಅಲ್ಲದೆ 2019 ಜೂನ್ ತಿಂಗಳಿನಲ್ಲಿ ಬನ್ನೂರು ಗ್ರಾಮದ ಕೊಳ್ಳೇರಿ ಶ್ರೀ ಮಹಾಲಿಂಗ ಹಾಗೂ ಅವರ ಹೆಂಡತಿ ಮಕ್ಕಳು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಮಾಡಿನ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ಮನೆಯ ಗೋದ್ರೇಜ್ ನಲ್ಲಿ ಇರಿಸಿದ ನಗದು ಚಿನ್ನದ ಕರಿಮಣಿ ಸರ , ಬೆಂಡೋಲೆ ಚಿನ್ನದ ಮೂಗು ಬೊಟ್ಟು ಚಿನ್ನದ ಓಲೆ ಸಹಿತ ಸುಮಾರು 2 ಲಕ್ಷ ಮೌಲ್ಯದ ನಗದು & ಚಿನ್ನಾಭರಣಗಳು ಕಳವು ಮಾಡಿದ್ದರು .

2019 ನವೆಂಬರ್ ತಿಂಗಳಿನಲ್ಲಿ ಕುಂದಾಪುರ ರೈಲ್ವೆಸ್ಟೇಶನ್ ವಸತಿಗೃಹದಲ್ಲಿ ವಾಸವಿದ್ದ ಟ್ರಾಕ್ಮೆನ್ ಸುಬ್ಬ ದೇವಾಡಿಗರು ವಸತಿ ಗೃಹಕ್ಕೆ ರಾತ್ರಿ ಬೀಗ ಹಾಕಿ ಹೋಗಿದ್ದ ಸಮಯದಲ್ಲಿ ಮನೆಯ ಬೀಗ ಮುರಿದು ವಸತಿ ಗೃಹದೊಳಗೆ ಗೋದ್ರೇಜ್ನಲ್ಲಿದ್ದ ನಗದು ಹಾಗೂ ಚಿನ್ನಾ ಭರಣಗಳು ಕಳವು ಮಾಡಿದ್ದರು.

ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು ಅವರಿಂದ ಸುಮಾರು 64.760 ಗ್ರಾಂ ಚಿನ್ನ ಹಾಗೂ 112 ಗ್ರಾಂ ಬೆಳ್ಳಿ ಆಭರಣಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಆಪಾದಿತ ವಿಲ್ಸನ್ ಮಂಕಿಯವನಾಗಿದ್ದು ಇತನು ಬನ್ನೂರು ಮೇರ್ಡಿ ಹಾಗೂ ಕಚೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಈ ಕಳ್ಳತನವನ್ನು ಮಾಡುತ್ತಿದ್ದು ಕಳವು ಮಾಡಿರುವ ಚಿನ್ನಾಭರಣಗಳನ್ನು ಗಂಗಾಧರನಿಗೆ ನೀಡುತ್ತಿದ್ದ. ಗಂಗಾಧರ ಕಳ್ಳತನ ಕ್ಕೆ ಬೆಂಬಲ ನೀಡುತ್ತಿದ್ದು ಕಳವು ಮಾಡಿರುವ ಚಿನ್ನಾಭರಣಗಳನ್ನು ಕೋಟೇಶ್ವರ ಮತ್ತು ಕುಂದಾಪುರದ ಸೊಸೈಟಿಗಳಲ್ಲಿ ಅಡವು ಇಟ್ಟು ಹಣ ಪಡೆದುಕೊಂಡು ಹಂಚಿಕೊಳ್ಳುತ್ತಿದ್ದರು. ಆರೋಪಿ ವಿಲ್ಸನ್ ಲೋಪಿಸ್ ( ಬಾಳ ಭಟ್ಕಳ ಗ್ರಾಮಾಂತರ ಠಾಣೆ, ಹಾಗೂ ಮಂಕಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೂಡ ಮನೆ ಕಳವು ನಡೆಸಿ ಜೈಲಿಗೆ ಹೋಗಿ ಜಾಮೀನು ಮೇಲೆ ಬಂದವನಾಗಿ ರುತ್ತಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಐಪಿಎಸ್. ರವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ  ಸಹಾಯಕ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್

ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ಅವರು ಈ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿ ವಿಲ್ಸನ್ ರೈಲ್ವೇ ನಿಲ್ದಾಣದ ಬಳಿ ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ಹಾಗೂ ಆರೋಪಿಯ ಗಂಗಾಧರ ಸೊಸೈಟಿಯಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡು ಆಪಾದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ

ಈ ಕಾರ್ಯಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪಿ.ಎಸ್.ಐ. ರಾಜ್ಕುಮಾರ್, ಶಂಕರನಾರಾಯಣ ಪೊಲೀಸ್ ಠಾಣೆ ಪಿ.ಎಸ್.ಐ. ಶ್ರೀಧರ ನಾಯ್ಕ, ಕುಂದಾಪುರ ಗ್ರಾಮಾಂತರ ಠಾಣಾ ಪಿ.ಎಸ್.ಐ. ಸದಾಶಿವ ಹಾಗೂ ಕುಂದಾಪುರ ಗ್ರಾಮಾಂತರ ಠಾಣೆ ಸಿಬ್ಬಂದಿಯವರು ಸತೀಶ್ , ಅನಿಲ್ , ಕುಂದಾಪುರ ಠಾಣಾ ಸಿಬ್ಬಂದಿಯವರು ಮಂಜುನಾಥ, ಸಂಶೋಷ ಮತ್ತು ವೃತ್ತ ಕಚೇರಿಯ ಸಿಬ್ಬಂದಿಯವರು ಸೀತಾರಾಮ, ವಿಕ್ಟರ್ , ಗುರುರಾಜ್ ಉದಯ ಚಾಲಕರಾದ ರವೀಂದ್ರ, ಸುರೇಶ್ ಹಾಗೂ ಸಿಡಿಆರ್ ವಿಭಾಗದ ಶಿವಾನಂದ ರವರು ಪಾಲ್ಗೊಂಡಿರುತ್ತಾರೆ


Spread the love