ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಹುಡುಗರು ನೀರುಪಾಲು

Spread the love

ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಬೈಂದೂರು ವ್ಯಾಪ್ತಿಯ ಆಲೂರು ಗ್ರಾಮದ ತಾರಿಬೇರು ಎಂಬಲ್ಲಿ ಇಬ್ಬರು ಹುಡುಗರು ನೀರುಪಾಲಾಗಿದ್ದಾರೆ. ಭಾನುವಾರದಂದು ಮನೆ ಸಮೀಪದ ಸೌಪರ್ಣಿಕಾ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಇಲ್ಲಿನ ಶಂಕರ ದೇವಾಡಿಗ ಅವರ ಪುತ್ರ ಅಕ್ಷಯ್(17) ಮತ್ತು ಅವರ ನಾದಿನಿ ಬೇಬಿ ದೇವಾಡಿಗರ ಪುತ್ರ ನವೀನ್ (16) ಮೃತರು.

ಶಂಕರ ದೇವಾಡಿಗರ ಮನೆಯಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮ ಇತ್ತು. ಈ ನಡುವೆ ಇವರಿಬ್ಬರು ಗೆಳೆಯರೊಡಗೂಡಿ(ಇನ್ನಿಬ್ಬರು) ಮನೆ ಸಮೀಪದ ಸೌಪರ್ಣಿಕಾ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಇಬ್ಬರು ನೀರಿಗಿಳಿಯುತ್ತಲೇ ಸೆಳವಿಗೆ ಸಿಲುಕಿದ್ದಾರೆ. ಇವರೊಂದಿಗೆ ಹೋಗಿದ್ದ ಇಬ್ಬರು ಹುಡುಗರು ಬೊಬ್ಬೆ ಹೊಡೆದಿದ್ದಾರೆ. ಊರಿನವರು, ಮನೆಯವರು ಒಂದುಗೂಡಿ ಹೊಳೆಗಿಳಿದು ಹುಡುಗರನ್ನು ಮೇಲಕ್ಕೆತ್ತುಷ್ಟರಲ್ಲಿ ಇಬ್ಬರ ಉಸಿರು ನಿಂತಿತ್ತು. 108 ಅಂಬ್ಯುಲೆನ್ಸ್ ಮೂಲಕ ಕುಂದಾಪುರಕ್ಕೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬೆಂದೂರು ಸಿಪಿಐ ಸುದರ್ಶನ್, ಗಂಗೊಳ್ಳಿ ಪಿಎಸ್‌ಐ ಸುಬ್ಬಣ್ಣ ಸ್ಥಳಕ್ಕೆ ಧಾವಿಸಿ ಮಹಜರು ಕಾರ್ಯ ನಡೆಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love