ಕೊಂಕಣಿ ವಿಭಾಗದ ಸಹಯೋಗದಲ್ಲಿ ಸುಗಮ ಸಂಗೀತ ಕಮ್ಮಟ

Spread the love

ಕೊಂಕಣಿ ವಿಭಾಗದ ಸಹಯೋಗದಲ್ಲಿ ಸುಗಮ ಸಂಗೀತ ಕಮ್ಮಟ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠವು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗದ ಸಹಯೋಗದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಕೊಂಕಣಿ ಸುಗಮ ಸಂಗೀತ ಕಮ್ಮಟವನ್ನು ಆಯೋಜಿಸಿತ್ತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಆರ್. ಪಿ. ನಾಯ್ಕರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೊಂಕಣಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಕೊಂಕಣಿ ವಿಭಾಗದ ಕಾರ್ಯವನ್ನು ಶ್ಲಾಘಿಸಿದರು. ಮುಂಬರುವ ದಿನಗಳಲ್ಲಿ ಕೊಂಕಣಿಯ ಕಂಪು ಎಲ್ಲೆಡೆ ಪಸರಿಸಲು ಇಂಥ ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಅಭಿಪ್ರಾಯಿಸಿದರು.

ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕರವರು ಪ್ರಾಸ್ತಾವಿಕವಾಗಿ ಪೀಠದ ಕಾರ್ಯಚಟುವಟಿಕೆಗಳನ್ನು ತಿಳಿಸಿ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸರವರು ಮಾತನಾಡಿ ಕೊಂಕಣಿ ಸುಗಮ ಸಂಗೀತ ಪ್ರಕಾರವನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.

ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕರಾದ ಡಾ. ಅರವಿಂದ ಶ್ಯಾನಭಾಗರವರು ವಂದನಾರ್ಪಣೆಗೈದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿರಸಿಯ ಡಾ. ಶೈಲಜಾ ಮಂಗಳೂರಕರ ಮತ್ತು ಜಗದೀಶ ನಾ. ಭಂಡಾರಿ ಆಗಮಿಸಿದ್ದರು. ಸ್ಥಳೀಯ ಪ್ರಕಾಶ ಶೆಣೈ, ಭಾವನಾ ಶೆಣೈ, ಅಪರ್ಣಾ ಪ್ರಭು, ಅಪೂರ್ವ ಕಿಣಿ, ಸಮರ್ಥ ಶೆಣೈ ತಂಡದವರು ಕೊಂಕಣಿ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ಲೋರಾ ಕ್ಯಾಸ್ತಲಿನೋ ನಿರೂಪಿಸಿದರು. ಅಕ್ಷತಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.


Spread the love