ಕೊಲ್ಲೂರು : ಮಹಾನವರಾತ್ರಿ ವಿಜೃಂಭಣೆಯ ರಥೋತ್ಸವ ಸಂಪನ್ನ
- ಋತ್ವೀಜರಿಂದ ಚಿಣ್ಣರಿಗೆ ವಿದ್ಯಾರಂಭ
ಕುಂದಾಪುರ:ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯಾಹ್ನ 1.50 ಕ್ಕೆ ಸಾವಿರಾರು ಭಕ್ತರು ಉಪಸ್ಥಿತಿಯಲ್ಲಿ ಶ್ರೀ ಮೂಕಾಂಬಿಕಾ ದೇವಿಯ ವೈಭವದ ರಥೋತ್ಸವ ಸಂಪನ್ನಗೊಂಡಿತು.
ನವರಾತ್ರಿ ಪ್ರಾರಂಭವಾದ ದಿನದಿಂದ ಮಹಾನವಮಿಯ ತನಕವೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ನಡೆಸಲಾಗಿತ್ತು. ಬುಧವಾರ ಮಧ್ಯಾಹ್ನ ತಂತ್ರಿ ನಿತ್ಯಾನಂದ ಅಡಿಗರ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ, ನವರಾತ್ರಿ ಕಟ್ಟು ಕಟ್ಟಳೆ ಪೂಜೆ, ಸುಮಂಗಲಿಯರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿಗಳ ಬಳಿಕ ದೇಗುಲದ ಗರ್ಭಗುಡಿಯಿಂದ ಮೂರ್ತಿಧಾರಕ ಕಾಳಿದಾಸ್ ಭಟ್ ಅವರು ಶ್ರೀ ಮೂಕಾಂಬಿಕಾ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದಿಂದ ಹೊರ ಆವರಣಕ್ಕೆ ತಂದರು. ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ, ಮುಹೂರ್ತ ಬಲಿ, ಓಡು ಬಲಿ ಸೇವೆ ಸೇವೆ ನಡೆಸಿದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.
ರಥ ಪೂಜೆ ನಡೆಸಿದ್ದ ತಂತ್ರಿಗಳು, ಶ್ರೀದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ಸೇರಿದ್ದ ಸಾವಿರಾರು ಭಕ್ತರು ಶ್ರೀ ದೇವಿಗೆ ಜಯ ಘೋಷವನ್ನು ಹಾಕುತ್ತಾ ರಥವನ್ನು ಎಳೆದರು. ಪಂಚ ವಾದ್ಯಗಳು, ಪಾರಂಪರಿಕ ವಾದ್ಯಗಳು, ಕೇರಳದ ಚೆಂಡೆ ತಂಡಗಳು ಇದ್ದವು. ರಥ ದೇವಳದ ಒಳ ಪ್ರಾಂಗಣದಲ್ಲಿ ಒಂದು ಸುತ್ತು ಕ್ರಮಿಸಿದ ಬಳಿಕ, ಸರಸ್ವತಿ ಮಂಟಪದಲ್ಲಿ ಅಷ್ಟಾವಧಾನ ಸೇವೆ ನೆರವೇರಿಸಿ, ಉತ್ಸವ ಮೂರ್ತಿಯನ್ನು ಮರಳಿ ಗರ್ಭಗುಡಿಗೆ ಕೊಂಡೊಯ್ಯಲಾಯಿತು. ದೇವರ ಮೂರ್ತಿಯನ್ನು ರಥದಿಂದ ಇಳಿಸುತ್ತಿದ್ದಂತೆ, ರಥದ ಮೇಲೆ ಮುಗಿಬಿದ್ದ ಕೇರಳ ಭಾಗದ ಭಕ್ತರು ಕ್ಷಣಾರ್ಧದಲ್ಲಿ ರಥಕ್ಕೆ ಅಲಂಕರಿಸಲಾಗಿದ್ದ ವಿವಿಧ ಹೂವುಗಳನ್ನು ಕಿತ್ತುಕೊಂಡು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದರು.
ಬುಧವಾರ ನಡೆದ ಶರನ್ನವರಾತ್ರಿ ಉತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉತ್ಸವದ ಕಾರಣಕ್ಕಾಗಿ ಬೆಳಿಗ್ಗೆ 3 ಗಂಟೆಯಿಂದಲೇ ಪೂಜಾ ವಿಧಿಗಳನ್ನು ಆರಂಭಿಸಲಾಗಿತ್ತು ಮುಂಜಾನೆ 5 ಗಂಟೆಯಿಂದ ಆರಂಭವಾದ ಶ್ರೀದೇವಿಯ ದರ್ಶನಕ್ಕಾಗಿ ಭಕ್ತರು ರಾತ್ರಿ 10 ಗಂಟೆಯವರೆಗೆ ಸರದಿ ಸಾಲಿನಲ್ಲಿ ನಿಂತಿದ್ದರು. ಅಂದಾಜು 20,000 ಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದುಕೊಂಡಿದ್ದರು.
ನಾಣ್ಯ ಎಸೆಯುವ ಪದ್ದತಿಗೆ ಬ್ರೇಕ್ : ಕೊಲ್ಲೂರಿನ ಮಹಾನವರಾತ್ರಿ ಉತ್ಸವದಂದು ರಥೋತ್ಸವದ ಸಂದರ್ಭದಲ್ಲಿ ಎಸೆಯುವ ನಾಣ್ಯಗಳು ಪಡೆದುಕೊಂಡರೆ ಐಶ್ವರ್ಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಲ್ಲಿ, ದೇವಸ್ಥಾನದ ಪ್ರಾಂಗಣದಲ್ಲಿ ಭಾರಿ ಪ್ರಮಾಣದಲ್ಲಿ ಭಕ್ತಸ್ತೋಮ ಸೇರುತ್ತಿದ್ದರು. ಇದರಿಂದ ಉಂಟಾಗುತ್ತಿದ್ದ ನೂಕುನುಗ್ಗಲು ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದರು.
ಈ ರೀತಿಯ ಸಂಭಾವ್ಯ ತಾಪತ್ರಯಗಳು ಬೇಡ ಎನ್ನುವ ಕಾರಣಕ್ಕಾಗಿ ವ್ಯವಸ್ಥಾಪನಾ ಸಮಿತಿಯೂ, ಅರ್ಚಕರ ಅಭಿಪ್ರಾಯ ಪಡೆದುಕೊಂಡು ರಥದ ಮೇಲಿನಿಂದ ನಾಣ್ಯ ಎಸೆಯುವ ಕ್ರಮವನ್ನು ಕೈಬಿಟ್ಟು ಶ್ರೀದೇವಿ ದರ್ಶನ ಪಡೆದ ಪ್ರತಿ ಭಕ್ತರಿಗೂ ಪ್ರಸಾದ ರೂಪದಲ್ಲಿ ನಾಣ್ಯ ವಿತರಣೆ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ನೂಕುನುಗ್ಗಲು ನಿಯಂತ್ರಣವಾಗಿ ಭಕ್ತರು ಸರಳವಾಗಿ ದೇವರ ದರ್ಶನ ಪಡೆದುಕೊಂಡು ನಾಣ್ಯ ಪ್ರಸಾದ ಪಡೆದುಕೊಂಡು ಧನ್ಯತೆ ಅನುಭವಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಪಿ.ವಿ.ಅಭಿಲಾಶ್, ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ರಾಜೇಶ್ ಕಾರಂತ್, ಸುರೇಂದ್ರ ಶೆಟ್ಟಿ, ಧನಾಕ್ಷೀ ಪೂಜಾರಿ, ಸುಧಾ ಬೈಂದೂರು, ಶಾಸಕರಾದ ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಐ.ಎಚ್.ತುಂಬಿಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ, ಮೂರ್ತಿ ಕಾಳಿದಾಸ್ ಭಟ್, ಕೆ.ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ ಅಡಿಗ, ಸುರೇಶ್ ಭಟ್, ಸತ್ಯನಾರಾಯಣ ಅಡಿಗ, ಶ್ರೀಶ ಭಟ್, ಅಪ್ಪಣ್ಣ ಭಟ್, ಗಜಾನನ ಜೋಯಿಸ್, ಪ್ರಮುಖರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಮೋಹನ್ಚಂದ್ರ ನಂಬಿಯಾರ್, ರತ್ನಾ ರಮೇಶ್ ಕುಂದರ್, ರಮೇಶ್ ಗಾಣಿಗ ಕೊಲ್ಲೂರು, ಕಿಶೋರ್ ಹೆಗ್ಡೆ, ಬೇಳೂರು ರಾಘವೇಂದ್ರ ಶೆಟ್ಟಿ, ಶರತ್ಕುಮಾರ್ ಶೆಟ್ಟಿ ಉಪ್ಪುಂದ, ರೋಹಿತ್ ಕುಮಾರ್ ಶೆಟ್ಟಿ ಸಿದ್ದಾಪುರ, ದಿನೇಶ್ ಶೆಟ್ಟಿ ಬೇಳೂರು ಮುಂತಾದವರಿದ್ದರು.
ಎಸ್.ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ ಸುಧಾಕರ ನಾಯ್ಕ್ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ, ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಹೋಂ ಗಾರ್ಡ್ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ವೃತ್ತ ನಿರೀಕ್ಷಕರಾದ ಜಯರಾಮ್ ಗೌಡ, ನಿಲೇಶ್ ಚೌಹಾಣ್, ಉಪನಿರೀಕ್ಷಕರುಗಳಾದ ವಿನಯ್ ಕೊರ್ಲಹಳ್ಳಿ, ತಿಮ್ಮೇಶ್, ಯೂನಸ್ ಗಡ್ಡೇಕರ್, ಸುಧಾರಾಣಿ, ಚಂದ್ರಕಲಾ ಪತ್ತರ್, ನವೀನ್ ಬೋರ್ಕರ್ ಇದ್ದರು.
ಗುರುವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣಿಗಳಿಗೆ ದೇವಸ್ಥಾನದ ಋತ್ವೀಜರ ಮೂಲಕ ವಿದ್ಯಾರಂಭಕ್ಕಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ, ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು.
ಉಚಿತ ಸೀರೆ ವಿತರಣೆ:
ಮಹಾನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ 6 ಸಾವಿರಕ್ಕೂ ಅಧಿಕ ಮಹಿಳಾ ಭಕ್ತರಿಗೆ ಪ್ರಸಾದ ರೂಪವಾಗಿ ಉಚಿತ ಸೀರೆ ವಿತರಣೆ.
ಬೆಂಗಳೂರಿನ ಉದ್ಯಮಿ ಮಹೇಶ್ ಆಚಾರ್ಯ ಅವರು ಗುರುವಾರ ದೇಗುಲದಲ್ಲಿ ವಿಶೇಷ ಭಕ್ಷ್ಯ ಗಳೊಂದಿಗೆ ಅನ್ನದಾನ ಸೇವೆ ಹಾಗೂ ಫಲಹಾರ ಸೇವೆ ಸಮರ್ಪಿಸಿದರು. 6 ಸಾವಿರಕ್ಕೂ ಅಧಿಕ ಮಂದಿ ದಾಸೋಹ ಸೇವೆಯನ್ನು ಸ್ವೀಕರಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಲಾ ತಂಡಗಳು ಹಾಗೂ ಕಲಾವಿದರು, ಸ್ವರ್ಣಮುಖಿ ರಂಗಮಂಟಪದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.