ಗಾಂಧೀಜಿ 150ನೇ ಜನ್ಮ ವರ್ಷಾಚರಣೆ : ಛಾಯಾಚಿತ್ರ ಪ್ರದರ್ಶನಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಚಾಲನೆ  

Spread the love

ಗಾಂಧೀಜಿ 150ನೇ ಜನ್ಮ ವರ್ಷಾಚರಣೆ : ಛಾಯಾಚಿತ್ರ ಪ್ರದರ್ಶನಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಚಾಲನೆ  

ಮಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸಾಧನೆಯ ಕುರಿತ 3 ದಿನಗಳ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವು ಬಂಟ್ವಾಳ ಬಿ.ಸಿ. ರೋಡ್ ಮಿನಿ ವಿಧಾನಸೌಧದಲ್ಲಿ ಪ್ರಾರಂಭಗೊಂಡಿತು.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಉದ್ಘಾಟನೆ ನೆರವೇರಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ, ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಗಾಂಧೀಜಿಯವರ ಬದುಕಿನ ವಿವಿಧ ಮಜಲುಗಳನ್ನು ನೋಡುವ ಅವಕಾಶ ಈ ಛಾಯಾಚಿತ್ರ ಪ್ರದರ್ಶನ ಮೂಲಕ ಸಿಕ್ಕಿದೆ. ಆ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನೂ ಕಾಣಬಹುದಾಗಿದೆ ಎಂದು ಅವರು ಹೇಳಿದರು.

ದ.ಕ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಸ್ವಾಗತಿಸಿ, ಛಾಯಾಚಿತ್ರ ಪ್ರದರ್ಶನದ ಉದ್ದೇಶವನ್ನು ತಿಳಿಸಿದರು.

ಬಂಟ್ವಾಳ ತಾಲೂಕು ಕಚೇರಿ ಒಳಾಂಗಣದಲ್ಲಿ ಆಯೋಜನೆಗೊಂಡಿರುವ ಪ್ರದರ್ಶನದಲ್ಲಿ ಗಾಂಧೀಜಿಯವರ ಹುಟ್ಟು ಮತ್ತು ಸಾವು ನಡುವಿನ ಅವಿಸ್ಮರಣೀಯ ಭಾವಚಿತ್ರಗಳೊಂದಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಗಾಂಧೀಜಿ ನಡೆದು ಬಂದಿರುವ ಹಾದಿ, ಅವರ ಜೀವನದ ಪ್ರಮಖ ಘಟ್ಟಗಳು, ಕಸ್ತೂರ ಬಾ ಜೊತೆಗಿನ ದಿನಗಳು, ಅಗಾಖಾನ್ ಅರಮನೆ, ನೌಕಾಲಿಗೆ ಪ್ರಯಾಣ ಮಾಡಿದ ದಿನಗಳು, ಶಾಂತಿಯ ತೀರ್ಥಯಾತ್ರಿಕನಾಗಿ ಗುರುತಿಸಿಕೊಂಡ ಕ್ಷಣ, ಮಹಾನ್ ವ್ಯಕ್ತಿಗಳ ಭೇಟಿ, ಚಳುವಳಿಗಳ ಹುಟ್ಟು, ಕುರಿತ ಮಾಹಿತಿಗಳು ಪ್ರದರ್ಶನದಲ್ಲಿ ಕಾಣಬಹುದು.

ಉಪವಾಸ ಸತ್ಯಾಗೃಹದ ಸಂದರ್ಭದಲ್ಲಿನ ಕಸ್ತೂರ ಬಾ ಅವರ ನಿಧನ, ನೂಲುವ ಚರಕದೊಂದಿಗೆ ಗಾಂಧೀಜಿ, ಗಾಂಧೀಜಿ ಅವರ ನಿಯತಕಾಲಿಕೆಗಳು, ನೆಹರು ಅವರೊಂದಿಗಿನ ದಿನಗಳು, ಗಾಂಧೀ ಕೈಗೊಂಡ ಕೊನೆಯ ಉಪವಾಸ, ವಿವಿಧ ಕಡೆಗಳ ಊರುಸ್‍ನಲ್ಲಿ ಪಾಲ್ಗೊಂಡ ಗಾಂಧಿ, ಕರ್ನಾಟಕದಲ್ಲಿ ಭೇಟಿ ನೀಡಿದ ದಿನಾಂಕ ಮತ್ತು ಸ್ಥಳಗಳ ಪರಿಚಯಗಳು, ತೊಂದರೆಗೊಳಗಾದ ಬಿಹಾರ ಮತ್ತು ಇತರ ಸ್ಥಳಗಳಿಗೆ ಬೇಟಿಯಾದ ದಿನಗಳು, ಪ್ರಾಣಿಗಳ ಮೇಲಿನ ಪ್ರೀತಿಯ ಕುರಿತ ಭಾವಚಿತ್ರಗಳು ಹೀಗೆ ಹಲವಾರು ಚಿತ್ರಶೀರ್ಷಿಕೆಗಳೊಂದಿಗೆ ಗಾಂಧೀಜಿಯವರ ಜೀವನ ಸಾಧನೆಯನ್ನು ಪ್ರದರ್ಶನದಲ್ಲಿ ತೋರಲಾಗಿದೆ.


Spread the love