ಗೌರಿ ಲಂಕೇಶ್‌ ಹತ್ಯೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ: ‘ಮಲ್ಲಿ ಅರ್ಜುನ್‌’ ಬಂಧನ

Spread the love

ಗೌರಿ ಲಂಕೇಶ್‌ ಹತ್ಯೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ: ‘ಮಲ್ಲಿ ಅರ್ಜುನ್‌’ ಬಂಧನ

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಡಿಪ್ಲೊಮಾ ವಿದ್ಯಾರ್ಥಿ ಮಲ್ಲನಗೌಡ ಬಿರಾದಾರ್‌ (22) ಎಂಬುವರನ್ನು ನಗರದ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರದ ಅವರು, ಲಿಂಗಸೂರಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದರು. ಕೆಲಸ ಹುಡುಕಿಕೊಂಡು ಎರಡು ತಿಂಗಳ ಹಿಂದೆ ನಗರಕ್ಕೆ ಬಂದು ವಿಜಯನಗರದ ಸ್ನೇಹಿತರೊಬ್ಬರ ಮನೆಯಲ್ಲಿ ವಾಸವಿದ್ದರು.

ಗೌರಿ ಹತ್ಯೆಯಾದ ದಿನದಂದು ಆರೋಪಿಯು ‘ಮಲ್ಲಿ ಅರ್ಜುನ್‌’ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ‘ಒಂದು ಗಂಜಿ ಗಿರಾಕಿಯ ಹೆಣ ಬಿತ್ತು. ಮಿಕ್ಕ ಗಂಜಿ ಗಿರಾಕಿಗಳಿಗೂ ಇದೆ ಗತಿ…’, ‘ಗೌರಿ ಲಂಕೇಶ್‌ ಮಟ್ಯಾಷ್‌’ ಹಾಗೂ ‘ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರುದ್ಧವಾದವರ ಜೀವ ತೆಗೆದರೆ ಆಯ್ತು’ ಎಂಬ ಬರಹಗಳನ್ನು ಪ್ರಕಟಿಸಿದ್ದರು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು 7 ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.


Spread the love