ಜಾತ್ರಾ ಮಹೋತ್ಸವಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ :ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಜಾತ್ರಾ ಮಹೋತ್ಸವಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ :ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ : ನವರಾತ್ರಿ, ದೀಪಾವಳಿ ಸೇರಿದಂತೆ ಇನ್ನಿತರೆ ಜಾತ್ರಾ ಮಹೋತ್ಸವಗಳಲ್ಲಿ ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆಯನ್ನು ನೀಡಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ಮುಂಬರುವ ನವರಾತ್ರಿ ಉತ್ಸವ ಆಚರಣೆ, ದೀಪಾವಳಿ ಹಾಗೂ ಇನ್ನಿತರೆ ಜಾತ್ರಾ ಮಹೋತ್ಸವಗಳನ್ನು ನಡೆಸುವ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತ ಪೂರ್ವಭಾವಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ -19 ಸೊಂಕು ದಿನೇ ದಿನ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಕಡಿವಾಣ ಹಾಕಲು ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ನೀಡುವ ಮಾರ್ಗಸೂಚಿಗಳನ್ನು ಚಾಚುತಪ್ಪದೆ ಪಾಲಿಸುವುದರೊಂದಿಗೆ ಭಕ್ತಾಧಿಗಳು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.

ದೇವಾಲಯಗಳಿಗೆ ಬರುವ ಭಕ್ತಾಧಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ 6 ಅಡಿ ಅಂತರದ ಬಾಕ್ಸ್ಗಳ ಮಾರ್ಕ್ಗಳನ್ನು ಹಾಕಬೇಕು. ಪ್ರತಿಯೊಬ್ಬ ಭಕ್ತಾಧಿಗಳು ಮುಖಗವಸು ಧರಿಸಬೇಕು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈ ತೊಳೆಯುವಿಕೆ ಅಥವಾ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಮಾಡುವಂತೆ ನೋಡಿಕೊಳ್ಳಬೇಕು. ರಜಾದಿನಗಳಲ್ಲಿ ಹಬ್ಬಕ್ಕೆ ಹೆಚ್ಚು ಜನರು ಬರುವ ಸಾಧ್ಯತೆ ಇರುವ ಹಿನ್ನಲೆ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದರು.

ದೇವಾಲಯಗಳಲ್ಲಿ ಜಾತ್ರಾ ಉತ್ಸವಗಳು, ಬ್ರಹ್ಮತ್ಸೋವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಸದರಿ ಉತ್ಸವಗಳನ್ನು ನಿಲ್ಲಿಸಲು ಸಾಂಪ್ರದಾಯವಲ್ಲದ ದೇವಾಲಯಗಳಲ್ಲಿ ಅಲ್ಲಿನ ತಂತ್ರಿಗಳು, ಆರ್ಚಕರು, ಸಿಬ್ಬಂದಿಯವರು ಸಾಂಕೇತಿಕವಾಗಿ ಒಳಪ್ರಕಾರದೊಳಗೆ ನಡೆಸಬೇಕು, ಸಾರ್ವಜನಿಕರು ಸಂದಣಿ ಇಲ್ಲದಂತೆ ಎಚ್ಚರವಹಿಬೇಕು ಎಂದರು.

65 ವರ್ಷ ಮೇಲ್ಪಟ್ಟವರು, ಬಹು ಅಸ್ವಸ್ಥ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಹಾಗೂ 10 ವರ್ಷದ ಒಳಗಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತು ಪಡಿಸಿ ಮನೆಯಲ್ಲಿಯೆ ಇರಬೇಕೆಂದು ಸಲಹೆ ನೀಡಿದರು.

ದೇವಾಲಯಗಳ ಸುತ್ತಮುತ್ತ ಕಾರ್ಯಕ್ರಮಗಳು ಮುಗಿದ ನಂತರ, ರಾತ್ರಿ ಮತ್ತು ಮಾರನೇ ದಿನದ ಬೆಳಗ್ಗೆ ಸಾನಿಟೈಸರ್ ಗೊಳಿಸುವುದು. ಸಾರ್ವಜನಿಕರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡುವುದರೊಂದಿಗೆ ಕೋವಿಡ್ ನಿಯಮ ಪಾಲಿಸುವಂತೆ ಧ್ವನಿವರ್ಧಕದಲ್ಲಿ ಅಗಿಂದಾಗೆ ಪ್ರಸಾರಮಾಡಬೇಕು ಎಂದರು.

ಈ ಹಿಂದೆ ದೇವಾಲಯಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಿದ್ದಲ್ಲಿ ಮುಂದುವರಿಸಿಕೊಂಡು ಹೋಗಬಹುದಾಗಿದ್ದು, ಹೊಸದಾಗಿ ಪ್ರಾರಂಭಿಸುವುದನ್ನು ತಪ್ಪಿಸಬೇಕು ಎಂದರು.

ದೇವಾಲಯಗಳ ಸುತ್ತಮುತ್ತ ಇರುವ ಅಂಗಡಿ ಹಾಗೂ ಹೊಟೇಲ್ ಮಾಲೀಕರ ಸಭೆಯನ್ನು ಕರೆದು ಅವರುಗಳು ಮುಖಗವಸನ್ನು ತಪ್ಪದೆ ಧರಿಸುವಂತೆ ಹಾಗೂ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಸೂಚನೆ ನೀಡಬೇಕೆಂದು ತಿಳಿಸಿದರು.

ಉಪವಿಭಾಗ ಅಧಿಕಾರಿಗಳು, ತಹಸೀಲ್ದಾರ್ ಪೊಲೀಸ್ ಇಲಾಖೆಯವರು ಧಾರ್ಮಿಕ ಸ್ಥಳಗಳಿಗೆ ಆಗಿಂದಾಗೆ ಭೇಟಿ ನೀಡಿ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳು ಪಾಲನೆಯಾಗುತ್ತಿರುವ ಬಗ್ಗೆ ಗಮನಿಸಬೇಕು. ತಪ್ಪಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಸುಧಾಕರ್ ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.


Spread the love