ತೀವ್ರಗೊಂಡ ಟಿಪ್ಪರ್ ವೇಗಕ್ಕೆ ಕಡಿವಾಣ ಅಭಿಯಾನ: ಸ್ಪೀಡ್ ಗವರ್ನರ್ ಅಳವಡಿಸಲು ಜಿಲ್ಲಾಡಳಿತ ನಿರ್ಧಾರ
ಕುಂದಾಪುರ: ಶೆಟ್ರಕಟ್ಟೆ ಭೀಕರ ಅಪಘಾತದ ಬಳಿಕ ಟಿಪ್ಪರ್ ಗಳ ಮಿತಿ ಮೀರಿದ ವೇಗಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ತೀವ್ರಗೊಂಡ ಬೆನ್ನಲ್ಲೇ ಜಿಲ್ಲಾಡಳಿತ ಗಣಿ ಸಂಬಂಧಿತ ಸಾಗಾಟದ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಗಣಿ ಸಂಬಂಧಿತ ಸಲಕರಣೆಗಳನ್ನು ಸರಬರಾಜು ಮಾಡುತ್ತಿರುವ ವಾಹನಗಳು ಅತೀಯಾದ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದು, ಸದ್ಯದಲ್ಲೇ ಆದೇಶ ಹೊರಡಿಸಲಿದ್ದಾರೆ.
ಸರಣಿ ದುರಂತ: ಸೋಮವಾರ ಶೆಟ್ರಕಟ್ಟೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಮಂದಿ ಬಸ್ ಪ್ರಯಾಣಿಕರು ಗಾಯಗೊಂಡಿರುವ ಸುದ್ದಿ ನೆನಪು ಮಾಸುವ ಮುನ್ನವೇ ಕುಂದಾಪುರ ಹೊರವಲಯದ ಹಂಗಳೂರಿನಲ್ಲಿ ಬುಧವಾರ ಇನ್ನೊಂದು ಟಿಪ್ಪರ್ ದುರಂತ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು.













