ನಮ್ಮ ದೇಶದ ಪ್ರಗತಿ ಯುವಜನರಿಂದಲೇ ಆಗಬೇಕಿದೆ: ಕೆ.ಜೆ.ಜಾರ್ಜ್

Spread the love

ನಮ್ಮ ದೇಶದ ಪ್ರಗತಿ ಯುವಜನರಿಂದಲೇ ಆಗಬೇಕಿದೆ: ಕೆ.ಜೆ.ಜಾರ್ಜ್

– ಸರ್ವಜ್ಞನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ
– ಯುವ ಸಮುದಾಯವನ್ನು ಜನಪರ ರಾಜಕಾರಣಕ್ಕೆ ಆಹ್ವಾನಿಸಿದ ಸಚಿವರು

ಬೆಂಗಳೂರು, ಮೇ 13, 2026: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಅಕಾಡೆಮಿ ಆಫ್ ಇನ್ ಸ್ಟಿಟ್ಯೂಷನ್ಸ್ (ಐಎಜಿಐ) ಇಂಡಿಯನ್ ಅಕಾಡೆಮಿ ಡಿಗ್ರಿ ಕಾಲೇಜು (ಸ್ವಾಯತ್ತ) ಬುಧವಾರ ಆಯೋಜಿಸಿದ್ದ 13 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಸಚಿವರು, “ದೇಶದ ಪ್ರಗತಿಗೆ ಯುವಶಕ್ತಿಯೇ ಚಾಲಕ ಶಕ್ತಿಯಾಗಿದೆ,” ಎಂದು ತಿಳಿಸಿದರು.

“ವಿದ್ಯಾರ್ಥಿಗಳು ಕನಸುಗಳನ್ನು ಕಾಣಬೇಕು. ಶಿಕ್ಷಣದಿಂದ ಆ ಕನಸುಗಳಿಗೆ ಜೀವ ಬರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಹಾಗೂ ಗುರಿಯಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ನಮ್ಮ ದೇಶದಲ್ಲಿ ಜನಸಂಖ್ಯೆ ಹೊರೆ ಎಂದಿದ್ದರು. ಆದರೆ ರಾಜೀವ್ ಗಾಂಧಿಯಂಥ ನಾಯಕರು ಜನಸಂಖ್ಯೆಯನ್ನು ಮಾನವ ಸಂಪನ್ಮೂಲ ಎಂದು ವಿಶ್ಲೇಷಿಸಿ ಕೌಶಲ್ಯ ಒದಗಿಸಿ ದೇಶ ಕಟ್ಟಿದರು,” ಎಂದರು.

“ನಮ್ಮ ದೇಶದ ಯುವಶಕ್ತಿ ಮನಸ್ಸು ಮಾಡಿದರೆ ಮುಂದಿನ 5-10 ವರ್ಷಗಳಲ್ಲಿ ಭ್ರಷ್ಟಾಚಾರ ಕೊನೆಗೊಳ್ಳಲಿದೆ. ರಾಜಕಾರಣ ಎಲ್ಲದಕ್ಕೂ ಕೇಂದ್ರಬಿಂದುವಾಗಿದೆ. ಯುವಜನತೆ ಜಾತಿ, ಮತ-ಪಂಥಗಳನ್ಜು ಬದಿಗಿಟ್ಟು, ಪ್ರತಿಯೊಬ್ಬ ನಾಗರಿಕರಿಗೂ ಘನತೆಯ ಬದುಕು ನೀಡಲು ಮನಸ್ಸು ಮಾಡಿ ರಾಜಕಾರಣಕ್ಕೆ ಬರಬೇಕಿದೆ. ನಾನು ಕೂಡ ಕೊಡಗಿನಲ್ಲಿ ಯಾವುದೇ ಹಿನ್ನಲೆ ಇಲ್ಲದಿದ್ದರೂ ಸ್ವಯಂ ಆಸಕ್ತಿಯಿಂದಲೇ ರಾಜಕಾರಣ ಆಯ್ಕೆಮಾಡಿಕೊಂಡು ಇಲ್ಲಿಯವರೆಗೂ ಬಂದಿದ್ದೇನೆ,” ಎಂದು ತಿಳಿಸಿದರು.

“ನಮ್ಮ ಸರ್ಕಾರದ ಆರ್ಥಿಕ ನೀತಿ ಹಾಗೂ ಜನಪರ ಬದ್ದತೆಯ ಪ್ರತೀಕವಾಗಿ ನಾವು ಘೋಷಿಸಿದ ಗ್ಯಾರಂಟಿ ಯೋಜನೆಗಳು ಇಂದು ಕರ್ನಾಟಕವನ್ನು ದೇಶದಲ್ಲೇ ಪ್ರಗತಿದಾಯಕ ರಾಜ್ಯವಾಗಿಸಿದೆ. ತಲಾ ಆದಾಯದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಮನೆಯೊಡತಿ ಮಹಿಳೆಯರಿಗೆ ಆರ್ಥಿಕ ಬಲ ನೀಡಿದ್ದು ನಮ್ಮ ಯೋಜನೆ. ಇವೆಲ್ಲವೂ ಸಾಧ್ಯವಾಗಿದ್ದು ಜನಪರ ಬದ್ದತೆಯ ಕಾರಣಕ್ಕಾಗಿಯೇ. ನಾವೇನು ಮತದಾರರಿಗೆ ಆಮಿಷ ನೀಡಿಲ್ಲ, ನೀಡುವುದೂ ಇಲ್ಲ. ನಾನು ದೇವರನ್ನು ನಂಬುತ್ತೇನೆ. ಎಲ್ಲರ ದೇವರು ಒಂದೇ. ದೇವರನ್ನು ನಂಬಿದವರು ಯಾವುದೇ ಕೆಟ್ಟ ಕೆಲಸಗಳಲ್ಲಿ ತೊಡಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ,” ಎಂದರು.

ಶಿಕ್ಷಣ ತಜ್ಞ ಹಾಗೂ ಇಂಡಿಯನ್ ಅಕಾಡೆಮಿ ಆಫ್ ಇನ್ ಸ್ಟಿಟ್ಯೂಷನ್ಸ್ (ಐಎಜಿಐ) ಅಧ್ಯಕ್ಷ ಡಾ. ಸೋಮಶೇಖರ್ ಮಾತನಾಡಿ “ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಡಿನ, ದೇಶದ ಗಣ್ಯರು, ಸಾಧಕರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಹಸ್ತ ಚಾಚಿ ಉನ್ನತ ಶಿಕ್ಷಣದ ಕನಸುಗಳಿಗೆ ರೆಕ್ಕೆ ಕಟ್ಟಿಕೊಡುತ್ತಿದೆ,” ಎಂದು ಹೇಳಿದರು.

“ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕರ ಶಿಕ್ಷಣದ ಮೇಲಿನ ಪ್ರೀತಿ ನಮ್ಮ ಸಂಸ್ಥೆಯನ್ನು ಪೋಷಿಸಿದೆ. ಸಂಸ್ಥೆಯನ್ನು ಕಲ್ಯಾಣನಗರದಲ್ಲಿ ಆರಂಭಿಸಿ, ವಿದ್ಯಾರ್ಥಿ ವೇತನ ಘೋಷಿಸಿದಾಗ ಕೆ.ಜೆ.ಜಾರ್ಜ್ ಅವರೇ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 60 ಕ್ಕೆ ಏರಿಕೆಯಾಗಿದ್ದು, ಇನ್ನು ಹೆಚ್ಚಾಗಲಿದೆ,” ಎಂದರು.

ಇಂಡಿಯನ್ ಅಕಾಡೆಮಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಭಾರತಿ ಸೋಮಶೇಖರ್ ಹಾಗೂ ಕಾಲೇಜು ಪ್ರಾಂಶುಪಾಲರಾದ ಡಾ. ಭಾರತಿ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋದಕ ವರ್ಗ ಹಾಗೂ ಪೋಷಕರು ಪಾಲ್ಗೊಂಡಿದ್ದರು.


Spread the love
Subscribe
Notify of

0 Comments
Inline Feedbacks
View all comments