ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ

Spread the love

ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ
ಮಂಗಳೂರು: ರೂಪಾಯಿ 1000 ಮತ್ತು 500 ರ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿರುವುದರಿಂದ ಅತ್ಯಂತ ತೊಂದರೆಗೊಳಗಾದವರು ಬೀಡಿ ಕಾರ್ಮಿಕರು ಹಾಗೂ ಇತರ ಜನಸಾಮಾನ್ಯರು. ದೈನಂದಿನ ಮೂಲಭೂತ ಆವಶ್ಯಕತೆಗಳಿಗಾಗಿ ಜನರು ಪರದಾಡುವಂತಾಗಿದೆ. ವಾರ ಇಡೀ ಕಟ್ಟಿದ ಬೀಡಿಗಳಿಗೆ ಸಿಗುವ ಮಜೂರಿಯಿಂದಲೇ ಬದುಕಿನ ಕನಿಷ್ಠ ಮೂಲಭೂತ ಆವಶ್ಯಕತೆಗಳನ್ನು ಪೂರೈಸುತ್ತಿದ್ದ ಬೀಡಿ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ತನ್ನ ದುಡಿಮೆಯ ಮಜೂರಿ ಸಿಗದೆ ಚಿಂತಾಕ್ರಾಂತರಾಗಿದ್ದಾರೆ. ಇಂತಹ ಕ್ಲಿಷ್ಟಕರ ಸಂದರ್ಭಗಳನ್ನು ಪರಿಹರಿಸಲು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವಿಶೇಷಾಧಿಕಾರಗಳನ್ನು ಬಳಸಿಕೊಂಡು ಈ ಬೀಡಿ ಕಾರ್ಮಿಕರನ್ನು ರಕ್ಷಿಸಬೇಕೆಂದು ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಆಗ್ರಹಿಸಿದೆ.
ಪೂರ್ವ ತಯಾರಿಯಿಲ್ಲದ ತರಾತುರಿಯ ಏಕಾಧಿಪತ್ಯದ ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಶ್ರೀಸಾಮಾನ್ಯನು ಸಮಸ್ಯೆಗೊಳಗಾಗಿರುವುದು ಖೇದಕರವೆಂದು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿ. ಎಸ್ ಬೇರಿಂಜ ಆಕ್ಷೇಪಿಸಿದ್ದಾರೆ.


Spread the love