ನ.30: ಅನಿತಾ ಪೂಜಾರಿ ಅವರಿಗೆ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಪ್ರದಾನ

Spread the love

ನ.30: ಅನಿತಾ ಪೂಜಾರಿ ಅವರಿಗೆ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಪ್ರದಾನ

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ 2019 ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ. ಪೂಜಾರಿ ತಾಕೊಡೆ ಅವರು ಚೊಚ್ಚಲ ‘ಎಂ.ಬಿ.ಕುಕ್ಯಾನ್’ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.

ಇದೇ ಬರುವ ನವೆಂಬರ್ 30ರಂದು ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರಗುವ ಸಮಾರಂಭದಲ್ಲಿ ಈ ಪದಕವನ್ನು ವಿಶ್ವವಿದ್ಯಾಲಯದ ವತಿಯಿಂದ ಪ್ರದಾನಿಸಲಾಗುವುದು. ಮುಖ್ಯ ಅತಿಥಿsಗಳಾಗಿ ಹಿರಿಯ ಸಾಹಿತಿ ಎಂ.ಬಿ.ಕುಕ್ಯಾನ್, ರಂಗತಜ್ಞ ಜಿ.ಲೋಕೇಶ್, ಸಾಹಿತಿ ಅನುಬೆಳ್ಳೆ, ಅಖಿಲ ಭಾರತೀಯ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಸಾಹಿತಿ ಶಾಂತಾರಾಮ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೂಲತಃ ಮೂಡಬಿದರೆಯ ತಾಕೊಡೆಯವರಾದ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಇವರು ಪ್ರತಿಭಾವಂತ ವಿದ್ಯಾರ್ಥಿ. ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. ಎಂ.ಎ. ಪದವಿಗೆ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಿಂದ ಸಿದ್ಧಪಡಿಸಿದ, ಡಾ.ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆ ಶೋಧ ಸಂಪ್ರಬಂಧ, ‘ಸವ್ಯಸಾಚಿ ಸಾಹಿತಿ’, ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ರಚಿಸಿದ ‘ಮೋಹನ ತರಂಗ’ ಹೊಸ ಪ್ರಕಟಿತ ಕೃತಿಗಳಾಗಿವೆ. ‘ಅಂತರಂಗದ ಮೃದಂಗ’ ಕೃತಿಗೆ ಜಗಜ್ಯೋತಿ ಕಲಾವೃಂದ (ರಿ) ದಿಂದ ‘ಶೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸಿ’್ತ ಹಾಗೂ ಶಿಕಾರಿಪುರದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ಮೈಸೂರು ದಸರಾ ಕವಿಗೋಷ್ಟಿಯಲ್ಲಿಯೂ ಭಾಗವಹಿಸಿದ್ದಾರೆ. ಅನಿತಾ ಪೂಜಾರಿ ಅವರ ಸಾಧನೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಅವರು ಮನಪೂರ್ವಕ ಶ್ಲಾಘಿಸಿದ್ದಾರೆ.


Spread the love