ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ; ನ್ಯಾಯ ಕೊಡಿಸುವಂತೆ ಕೋರಿದ ಸಂತ್ರಸ್ತೆಯ ತಾಯಿ
ಪುತ್ತೂರು: ಬಿಜೆಪಿ ಮುಖಂಡನ ಪುತ್ರನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಬಳಿಕ ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ಇದೀಗ ಮಾಧ್ಯಮಗಳ ಮುಂದೆ ಮಗಳಿಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆಯ ತಾಯಿ, ʼನನ್ನ ಮಗಳು ಮತ್ತು ಆರೋಪಿ ಕೃಷ್ಣ.ಜೆ.ರಾವ್ ಪ್ರೌಢಶಾಲೆಯಲ್ಲಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಮುಂದುವರಿದು ದೈಹಿಕ ಸಂಪರ್ಕದ ವರೆಗೂ ಸಾಗಿದೆ. ಆದರೆ ಮಗಳು ಗರ್ಭಿಣಿಯಾಗಿ ಏಳು ತಿಂಗಳ ಬಳಿಕ ನಮಗೆ ವಿಚಾರ ತಿಳಿದಿದೆ. ಈ ವೇಳೆ ನಾನು ಆತನ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರ ಬಳಿ ಪ್ರಶ್ನಿಸಿದ್ದೆ. ಅವರು ಅವತ್ತೇ ಇಬ್ಬರನ್ನೂ ಮದುವೆ ಮಾಡುವ ಭರವಸೆಯನ್ನು ನೀಡಿದ್ದರು ಎಂದು ತಿಳಿಸಿದರು.
ಆ ಬಳಿಕ ನನಗೆ ಕಾಲ್ ಮಾಡಿದ ಆರೋಪಿ ಕೃಷ್ಣ.ಜೆ.ರಾವ್ ʼಮಗಳನ್ನು ಮದುವೆಯಾಗೋದಿಲ್ಲ. ನೀವು ಮದುವೆಯಾಗಲು ಒತ್ತಾಯ ಮಾಡಿದರೆ ನಾನು ಆತ್ಮಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಈ ಹಿನ್ನೆಲೆ ನಾವು ಆತನ ವಿರುದ್ಧ ದೂರು ನೀಡಲು ಪುತ್ತೂರು ಮಹಿಳಾ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಕೂಡಾ ಠಾಣೆಗೆ ಬಂದಿದ್ದರು. ಆರೋಪಿಯ ತಂದೆ ಠಾಣೆಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಮಾತನಾಡಿದ ಬಳಿಕ ನನ್ನ ಕೈಗೆ ಮೊಬೈಲ್ ನೀಡಿದ್ದರು. ನನ್ನ ಬಳಿ ಮಾತನಾಡಿದ ಶಾಸಕರು. ಅವರು ಮದುವೆ ಮಾಡಿಸಲು ಒಪ್ಪಿದ್ದಾರೆ. ಹುಡುಗನ ಭವಿಷ್ಯದ ಪ್ರಶ್ನೆ ಇರುವ ಕಾರಣ ಪೊಲೀಸ್ ದೂರು ನೀಡಬೇಡಿ ಎಂದು ಹೇಳಿದರು. ಇಬ್ಬರನ್ನೂ ಮದುವೆ ಮಾಡಿಸಿ ಕೊಡುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದರು. ಅಲ್ಲದೆ ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ರಾವ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ ಎಂದು ಹೇಳಿದರು.
ಜೂನ್ 23 ಕ್ಕೆ ಆರೋಪಿ ಕೃಷ್ಣ.ಜೆ.ರಾವ್ ಗೆ 21 ವರ್ಷ ಪೂರ್ಣ ಗೊಂಡಿದೆ. ಜೂನ್ 22 ರಂದು ಆರೋಪಿ ಕೃಷ್ಣ ರಾವ್ ನನಗೆ ಕಾಲ್ ಮಾಡಿ ನಿಮ್ಮ ಮಗಳನ್ನು ನಾನು ಮದುವೆಯಾಗೋದಿಲ್ಲ ಎಂದು ತಿಳಿಸಿದ್ದಾನೆ. ಅಲ್ಲದೆ ಆತನ ತಾಯಿ ನಿಮ್ಮ ಮಗಳ ಮದುವೆ ನನ್ನ ಮಗನೊಂದಿಗೆ ಕನಸಿನಲ್ಲೂ ಸಾಧ್ಯವಿಲ್ಲ ಎಂದಿದ್ದರು. ಹೊಟ್ಟೆಯಲ್ಲಿರುವ ಮಗುವನ್ನು ಅಬಾರ್ಷನ್ ಮಾಡಿಸಿ ತೆಗಿಸಿ ಬಿಡಿ. ಅದಕ್ಕೆ ಬೇಕಾದ ಹಣವನ್ನು ಕೊಡುತ್ತೇವೆ ಎಂದು ಆರೋಪಿಯ ತಂದೆ ನಮಗೆ ಹೇಳಿದ್ದಾರೆ. ಆದರೆ ನಾವು ಅದಕ್ಕೆ ಒಪ್ಪಿಲ್ಲ ಎಂದರು.
ಮಗು ಆರೋಪಿ ಕೃಷ್ಣ.ಜೆ.ರಾವ್ ನದ್ದೇ ಎನ್ನುವುದಕ್ಕೆ ಎಲ್ಲಾ ಪುರಾವೆಗಳೂ ಇವೆ. ನಾವು ಮಗುವಿನ ಡಿ.ಎನ್.ಎ ಪರೀಕ್ಷೆ ಮಾಡಲು ಸಿದ್ಧರಿದ್ದೇವೆ. ಆದರೆ ಆರೋಪಿಯ ತಂದೆ ಡಿಎನ್ಎ ಪರೀಕ್ಷೆ ಬೇಡ ಅಂದಿದ್ದಾರೆ. ಮಗುವಿಗೆ ಮೂರು ತಿಂಗಳು ಕಳೆದ ಬಳಿಕ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ. ಅವರು ಮಗು ಅವನದಲ್ಲ ಎಂದು ಮಹಾಲಿಂಗೇಶ್ವರ ದೇವರ ಮುಂದೆ ಆಣೆ ಮಾಡಲಿ ಎಂದು ಹೇಳಿದರು.
ಮೊದಲು ದೂರು ನೀಡಲು ಹೋದಾಗ ಶಾಸಕ ಅಶೋಕ್ ಕುಮಾರ್ ರೈ ತಡೆದಿದ್ದರು. ಬಳಿಕ ನಾನು ನ್ಯಾಯ ಕೊಡಿಸುವಂತೆ ಹಿಂದುತ್ವ ಸಂಘಟನೆಗಳ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ ,ಶರಣ್ ಪಂಪ್ ವೆಲ್ ಅವರ ಬಳಿ ಹೇಳಿಕೊಂಡಿದ್ದೆ. ಆಗ ಅರುಣ್ ಪುತ್ತಿಲ ಅವರು ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಹಸಂತಡ್ಕ ಅವರು ʼನಾನು ಮಾತನಾಡಿದ್ದೇನೆ ಹುಡುಗ ಮದುವೆಗೆ ಒಪ್ಪುವುದಿಲ್ಲʼ ಅಂತ ಹೇಳಿದರು. ಈ ಮಧ್ಯೆ ಮುರಳೀಕೃಷ್ಣ ಹಸಂತಡ್ಕ ಅವರು ಮಗುವನ್ನು ತೆಗೆಸಿ ಬಿಡಿ ಅವರು ನಿಮಗೆ 10 ಲಕ್ಷ ಕೊಡ್ತಾರೆ ಎಂದೂ ಸಂಧಾನಕ್ಕೆ ಬಂದಿದ್ದರು. ಅವರು ಯಾರು ಕೂಡಾ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೇರೆ ಕೋಮಿನ ಯುವತಿಯಾಗಿದ್ದರೆ ಇಷ್ಟು ಹೊತ್ತಿಗೆ ಮದುವೆ ಮಾಡಿಸುತ್ತಿದ್ದರು. ಆದರೆ ಈಗ ಅವರು ಸುಮ್ಮನಾಗಿದ್ದಾರೆ. ಶಾಸಕರ ಬಳಿ ಮತ್ತೊಮ್ಮೆ ನಾನು ಮಾತನಾಡಿದಾಗ ನೀವು ದೂರು ನೀಡಿ ಎಂದು ಹೇಳಿದ್ದಾರೆ. ಆರೋಪಿ ನಾಪತ್ತೆಯಾಗಿ 5 ದಿನ ಕಳೆದರೂ ಪೋಲೀಸರು ಆತನನ್ನು ಬಂಧಿಸಿಲ್ಲ. ಎಸ್ಪಿಯನ್ನೂ ಭೇಟಿ ಮಾಡಿ ನಮಗಾದ ಅನ್ಯಾಯದ ಬಗ್ಗೆ ತಿಳಿಸಿದ್ದೇವೆ. ಆದರೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಮೌನವಾಗಿದೆ ಎಂದು ಅನಿಸುತ್ತಾ ಇದೆ ಎಂದು ಆರೋಪಿಸಿದರು.