ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿ,  ಶಿಕ್ಷಕರಿಗೆ ಕರೆ – ಶ್ರೀನಿವಾಸ್ ದೇಶಪಾಂಡೆ

Spread the love

ಮಂಗಳೂರು : ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸ್ಪಂದಿಸಲು ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಕರ್ನಾಟಕ ಬ್ಯಾಂಕ್ ಸದಾ ಶ್ರಮಿಸುತ್ತಿದೆ ಎಂದು ಬ್ಯಾಂಕಿನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಭಂದಕರಾದ ಶ್ರೀನಿವಾಸ ದೇಶಪಾಂಡೆ ಘೋಷಿಸಿದರು.

ನಗರದ ದ.ಕ.ಜಿ.ಪ ಶಾಲೆ ಬಿಜೈ ಕಾಪಿಕಾಡ್ ಶಾಲೆಯ ಸಭಾಂಗಣದಲ್ಲಿ ಇಂದು, ರೋಟರಿ ಮಂಗಳೂರು ಸೆಂಟ್ರಲ್ ಮತ್ತು ಶೀಲ್ಡ್ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಜರಗಿದ “ವಿದ್ಯಾರ್ಥಿಗಳಿಗೆ ಉಚಿತ ಕೊಡೆಗಳ ವಿತರಣಾ” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಮತ್ತು  ಶಿಕ್ಷಕ ವೃಂದದವರನ್ನು ಉದ್ದೇಶಿಸಿ ಮಾತನಾಡಿದರು.

1-karnataka-bank 2-karnataka-bank-001 3-karnataka-bank-002 4-karnataka-bank-003 5-karnataka-bank-004

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆದು ಅವರ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಕರೆ ನೀಡಿದರು. ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿ ಸಂಸ್ಥೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಆಶ್ವಾಸನೆ ನೀಡಿದರು. ಬಳಿಕ 125 ವಿದ್ಯಾರ್ಥಿಗಳಿಗೆ ಉಚಿತ ಕೊಡೆಗಳನ್ನು ವಿತರಿಸಿ ಇದು ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳ ಪ್ರಯುಕ್ತ ಎಂದು ನುಡಿದರು.

ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ಇಲಾಯಸ್ ಸ್ಯಾಂಕ್ಟಿಸ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯವಾಗಿದ್ದು ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಯವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ವಲಯ ಅಧಿಕಾರಿ ರಾಜಗೋಪಾಲ್ ರೈ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ವಿ. ಮಲ್ಯ ಶೀಲ್ಡ್ ಪ್ರತಿಷ್ಠಾನದ ಅಧ್ಯಕ್ಷ ಧರ್ಮಿತ್ ರೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಬೂನು ತಯಾರಿಕಾ ಕಂಪೆನಿ ಮೆಡಿಮಿಕ್ಸ್ ಉಚಿತ ಸಾಬೂನುಗಳನ್ನು, ಮತ್ತು ಭಂಡಾರ್ಕರ್ ರಿಸೋರ್ಟ್ಸ್ ರವರು ಸಿಹಿ ತಿಂಡಿ ಮತ್ತು ಬಿಸ್ಕಿಟನ್ನು ಪ್ರಾಯೋಜಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾವನ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಆರುಣಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಸಿಸಿಲಿಯ ವಂದಿಸಿದರು.


Spread the love