ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಇಂದು ಬಿರುಸಿನ ಪ್ರಚಾರ
ಮಂಗಳೂರು: ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಈ ಎರಡೂ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು, ತಾಳಿಪಾಡಿ, ಉಳ್ಳಂಜೆ, ಕೊಡೆತ್ತೂರು, ಕಟೀಲು, ಕಿನ್ನಿಗೋಳಿ ಪೇಟೆ ಮುಂತಾದ ಕಡೆಗಳಲ್ಲಿ ಮನೆ- ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ.
ಹಾಗೆಯೇ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು, ಕರಂಬಾರು, ಪಡ್ಪು, ಕೆಂಜಾರು ಕಾನ, ಪೇಜಾವರ, ಶ್ರೀದೇವಿ ಕಾಲೇಜು ಸಮೀಪದ ಪ್ರದೇಶ ಸೇರಿದಂತೆ ಹಲವೆಡೆ ಮನೆ-ಮನೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರಗಳಿಂದ ಜನತೆ ರೋಸಿ ಹೋಗಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗೆ ಗಮನಹರಿಸುವುದನ್ನು ಬಿಟ್ಟು ಸಿದ್ದರಾಮಯ್ಯ ಸರ್ಕಾರವು ಬರೀ ಅಧಿಕಾರದ ವ್ಯಾಮೋಹಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾದಾಟದಲ್ಲೇ ಕಾಲ ಕಳೆಯುತ್ತಿದೆ. ಇಂಥಹ ಅಭಿವೃದ್ಧಿ ಶೂನ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾದರೆ, ಪ್ರಜ್ಞಾವಂತ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಕ್ತ ಆಡಳಿತಕ್ಕೆ ಪಣ ತೊಟ್ಟು ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸಬೇಕೆಂದು ಕ್ಯಾ. ಚೌಟ ಇದೇ ಸಂದರ್ಭದಲ್ಲಿ ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್ ವಾರ್ಡ್ಗಳ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಮತ ಪ್ರಚಾರದ ವೇಳೆ ಬಿಜೆಪಿಯ ಮುಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮುಖಂಡರಾದ ಭುವನಾಭಿರಾಮ ಉಡುಪ, ಜೋಯಲ್ ಮೆಂಡೋನ್ಸ, ಈಶ್ವರ್ ಕಟೀಲು, ರಂಗನಾಥ್ ಶೆಟ್ಟಿ ಮುಲ್ಕಿ, ನಂದನ್ ಮಲ್ಯ, ಸಂತೋಷ್ ರೈ ಬೋಳಿಯಾರ್, ಸುನಿಲ್ ಆಳ್ವ ಮುಂತಾದವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಜತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು.
ಬಜಪೆ ಪಟ್ಟಣ ಪಂಚಾಯತ್ನ 19 ವಾರ್ಡ್ಗಳಿಗೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ನ 18 ವಾರ್ಡ್ಗಳಿಗೆ ಡಿ.21ರಂದು ಮತದಾನ ನಡೆಯಲಿದೆ.












