ಬಿರುಸಿನ ಮಳೆ: ಅಮಾಸೆಬೈಲು ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

Spread the love

ಬಿರುಸಿನ ಮಳೆ: ಅಮಾಸೆಬೈಲು ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆ

ಕುಂದಾಪುರ : ಕಳೆದ 2 ದಿನಗಳ ಹಿಂದೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿನ ವಿಠಲ ಗೊಲ್ಲ (42) ಎನ್ನುವವರ ಶವ ಗುರುವಾರ ಪತ್ತೆಯಾಗಿದೆ.

ತಾಲ್ಲೂಕಿನ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿನ ಕೃಷಿಕ ವಿಠಲ ಗೊಲ್ಲ ಬುಧವಾರ ಮಧ್ಯಾಹ್ನ ಮನೆ ಸಮೀಪ ಹರಿಯುವ ಹೊಳೆ ಬದಿಗೆ ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಈ ವೇಳೆ ಹೊಳೆ ದಂಡೆಯ ಸಮೀಪದಲ್ಲಿನ ಕಲ್ಲಿನ ಮೇಲೆ ಆಕಸ್ಮಿಕವಾಗಿ ಕಾಲು ಇಟ್ಟಾಗ ಮಣ್ಣು ಸಡಿಲಗೊಂಡು, ನಿಯಂತ್ರಣ ತಪ್ಪಿ ರಭಸವಾಗಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಕಾರಣದಿಂದ ವಿಠಲ ಗೊಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಅವರ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು ಪತ್ತೆಯಾಗಿರಲಿಲ್ಲ. ಗುರುವಾರ ಮನೆಯಿಂದ 3 ಕಿ. ಮೀ ದೂರದಲ್ಲಿನ ಶಂಕರನಾರಾಯಣ ಪೋಲೀಸ ಠಾಣಾ ವ್ಯಾಪ್ತಿಯ ಕೆರೆಕಟ್ಟೆ ಬಳಿಯಲ್ಲಿ ಅವರ ಶವ ಪತ್ತೆಯಾಗಿದೆ.

ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love