ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ನಡುವೆ ಹೊಸ ರೈಲು ಘೋಷಣೆ

Spread the love

ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ನಡುವೆ ಹೊಸ ರೈಲು ಘೋಷಣೆ

ಉಡುಪಿ: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ರಾಜ್ಯ ರೈಲ್ವೇ ಖಾತೆ ಸಚಿವರಾದ ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ, ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ ರೈಲು ಸೇವೆಯು ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಕಾಲದ ಅನಗತ್ಯ ಕಾಯುವಿಕೆಯನ್ನು ತಪ್ಪಿಸಿ, ಬೆಂಗಳೂರು-ಉಡುಪಿ/ಕುಂದಾಪುರ ಮಧ್ಯೆ ರೈಲು ಪ್ರಯಾಣ ಸಮಯವನ್ನು ಮೂರು ಗಂಟೆಗಳಷ್ಟು ಕಾಲ ಕಡಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ಕರಾವಳಿ ಕರ್ನಾಟಕವನ್ನು ತಲುಪುವಂತೆ ಮಾಡುವುದು.

ದೆಹಲಿಯಲ್ಲಿ ಸಚಿವರಿಗೆ ಸಂಸದರಾದ ಶೋಭಾ ಕರಂದ್ಲಾಜೆಯವರು ಕರಾವಳಿಯ ಈ ಬಹು ದೊಡ್ಡ ಬೇಡಿಕೆಯನ್ನು ಸಲ್ಲಿಸಿದ ಸಂದರ್ಭ, ಸಚಿವರು ಖುದ್ದಾಗಿ ಸಂಸದರ ಸಮ್ಮುಖದಲ್ಲಿ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಂಡಿರುತ್ತಾರೆ. ನಂತರ ನೈರುತ್ಯ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಂಸದೆ ಶೋಭಾ ಕರಂದ್ಲಾಜೆಯವರು ತಕ್ಷಣದಲ್ಲಿಯೇ ಈ ಹೊಸ ರೈಲಿನ ಸೇವೆಯನ್ನು ಆರಂಭಿಸುವಂತೆ ಕೇಳಿಕೊಂಡಿರುತ್ತಾರೆ, ಕರಾವಳಿಗೆ ನ್ಯಾಯಯುತವಾದ ರೈಲನ್ನು ಒದಗಿಸುವ ಸಂಸದರ ಅವಿರತ ಪ್ರಯತ್ನ ಇಂದು ಫಲಪ್ರದವಾಗಿದೆ.

ಸಂಸದೆ ಶೋಭಾ ಕರಂದ್ಲಾಜೆಯವರ ಸತತ ಪ್ರಯತ್ನದಿಂದಾಗಿ ಆರಂಭಗೊಳ್ಳುತ್ತಿರುವ ಈ ರೈಲು ಬೆಂಗಳೂರಿನಿಂದ ಸಂಜೆ 06:45ಕ್ಕೆ ಹೊರಟು, ಬೆಳಗ್ಗೆ 04:50ಕ್ಕೆ ಉಡುಪಿ, 05:18ಕ್ಕೆ ಕುಂದಾಪುರಕ್ಕೆ ತಲುಪುವುದು. ಸಂಜೆ 04:40ಕ್ಕೆ ವಾಸ್ಕೋದಿಂದ ಆರಂಭಗೊಂಡು, ರಾತ್ರಿ 10:54ಕ್ಕೆ ಕುಂದಾಪುರ, 11:24ಕ್ಕೆ ಉಡುಪಿಯಿಂದ ಹೊರಟು ಬೆಂಗಳೂರಿಗೆ ಬೆಳಿಗ್ಗೆ ಸುಮಾರು 09:00 ಗಂಟೆಗೆ ತಲುಪಲಿದೆ. ವಾಸ್ಕೋ-ಬೆಂಗಳೂರು ಪ್ರಯಾಣ ಸಮಯವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗುವುದು ಎಂಬ ಭರವಸೆಯು ರೈಲ್ವೆ ಅಧಿಕಾರಿಗಳಿಂದ ದೊರಕಿದೆ. ಈ ಮೂಲಕ ಕರಾವಳಿ ಕರ್ನಾಟಕದ (ಉಡುಪಿ/ಕುಂದಾಪುರ/ಬೈಂದೂರು/ಕಾರವಾರದ) ದಶಕಗಳ ಬೇಡಿಕೆಯು ಈಡೇರಿದಂತಾಗಿದೆ.

ಉಡುಪಿ-ಕುಂದಾಪುರದ ಪ್ರಯಾಣಿಕರಿಗೆ ಈ ರೈಲು ಬೆಂಗಳೂರು ಹಾಗೂ ವಾಸ್ಕೋವನ್ನು ಸಂಪರ್ಕಿಸಲು ಬೇಕಾದ ಎರಡು ರೈಲಿನ ಸೌಲಭ್ಯವನ್ನು ಒಂದೇ ರೈಲಿನ ಮೂಲಕ ಕಲ್ಪಿಸಿಕೊಡುತ್ತಲಿದೆ ಹಾಗೂ ಗೋವಾ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅವಶ್ಯವಿದ್ದ ರೈಲಿನ ಬೇಡಿಕೆಯನ್ನೂ ಈಡೇರಿಸಲಿದೆ. ಈ ಹೊಸ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಓಡಾಟವನ್ನು ಆರಂಭಿಸಲಿದೆ ಎಂದು ಸಚಿವರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.


Spread the love